ಮುದ್ದೇಬಿಹಾಳ: ‘ಮಂಗಳೂರು ಚಲೋ’ ಬೈಕ್ ರ್್ಯಾಲಿಗೆ ರಾಜ್ಯ ಸರ್ಕಾರ ತಡೆಯೊಡ್ಡಿದ್ದನ್ನು ಖಂಡಿಸಿ ಇಲ್ಲಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಮಂಗಳವಾರ ಬಸವೇಶ್ವರ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಮಂಗಳಾ ದೇವಿ ಬಿರಾದಾರ, ಮಂಗಳೂರಿಗೆ ಹೋಗಬೇಕೆನ್ನುವ ಬಿಜೆಪಿ ಕಾರ್ಯ ಕರ್ತರ ಶಾಂತಿಯುತ ರ್್ಯಾಲಿಗೆ ಅಡ್ಡಿಪಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ.
ಇದು ನಾಚಿಕೆಗೇಡಿನದ ಕೃತ್ಯವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ಮಹಿಳೆ ಅನ್ನೋದನ್ನೂ ಲೆಕ್ಕಿಸದೇ ನೆಲದ ಮೇಲೆ ಎಳೆದಾಡಿದ್ದು ಸರ್ಕಾರದ ವಿಕೃತ ಮನಸ್ಥಿತಿ ತೋರಿಸುತ್ತದೆ. ಶಾಂತಿಯ ನಾಡು ಅಶಾಂತಿಗೊಳಗಾದರೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.
ಸಭೆಯನ್ನುದ್ದೇಶಿಸಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಸ್ . ಪಾಟೀಲ ಕೂಚಬಾಳ, ಶಿವಶಂಕರಗೌಡ ಹಿರೇಗೌಡರ, ಮಲಕೇಂದ್ರಗೌಡ ಪಾಟೀಲ ಮಾತನಾಡಿದರು.