ಸಿರುಗುಪ್ಪ: ಪ್ರವಾಸೋದ್ಯಮ ಇಲಾಖೆ ಆರಂಭಿ ಸಬೇಕಿದ್ದ ಪ್ರವಾಸಿ ತಾಣವೊಂದು ಶಂಕುಸ್ಥಾಪನೆ ಗೊಂಡ ಬಳಿಕ ಅರೆಬರೆ ಕಾಮಗಾರಿಯಾಗಿ ಪಾಳು ಬಿದ್ದಿದೆ.
ಕೆಂಚನಗುಡ್ಡ ಗ್ರಾಮದ ಬಳಿ ತುಂಗಭದ್ರಾ ನದಿಗೆ ವಿಜಯನಗರ ಅರಸರು ನಿರ್ಮಿಸಿರುವ ಅಣೆಕಟ್ಟಿನಿಂದ ಹೊರ ಬೀಳುವ ನೀರು ಜಲಪಾತವಾಗಿ ಹರಿಯುತ್ತದೆ. ಈ ದೃಶ್ಯ ಕಣ್ತುಂಬಿಸಿಕೊಳ್ಳುವ ಸಲುವಾಗಿ ಪ್ರವಾಸೋದ್ಯಮ ಇಲಾಖೆ ಇಲ್ಲಿ ಪ್ರವಾಸಿ ಕೇಂದ್ರ ಆರಂಭಿಸಲು ಮುಂದಾಗಿತ್ತು. ಉದ್ಯಾನ, ಜಿಂಕೆ ವನ ಅಭಿವೃದ್ಧಿ ಪಡಿಸುವ ಈ ಯೋಜನೆಗೆ ವರ್ಷಗಳ ಹಿಂದೆಯೇ ಚಾಲನೆ ನೀಡಲಾಗಿತ್ತು.
ಜಿಲ್ಲೆಯ ಹಿರಿಯ ರಾಜಕಾರಣಿ ದಿವಂಗತ ಎಂ.ಪಿ.ಪ್ರಕಾಶ್ ಅವರು ಈ ಸ್ಥಳವನ್ನು ಪ್ರವಾಸಿ ತಾಣ ಮಾಡಿ, ಜಿಂಕೆ ವನ ಮತ್ತು ಮಕ್ಕಳ ಉದ್ಯಾನ ನಿರ್ಮಿಸುವ ಆಶಯ ಹೊಂದಿದ್ದರು. ಅಂತೆಯೇ ಬಿಜೆಪಿ ಸರ್ಕಾರದಲ್ಲಿ ಪ್ರವಾ ಸೋದ್ಯಮ ಸಚಿವರಾಗಿದ್ದ ಗಾಲಿ ಜನಾರ್ದನರೆಡ್ಡಿ ಅವರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
‘ಆರಂಭದ ದಿನಗಳಲ್ಲಿ ಉದ್ಯಾನ ಸುತ್ತ ಕಾಂಪೌಂಡ್ ಮತ್ತು ಮಂಟಪ ನಿರ್ಮಾಣ ಮಾಡಲಾಯಿತು. ಕಾಲ ಕ್ರಮೇಣ ಗುತ್ತಿಗೆದಾರರು ಅರೆಬರೆ ಕಾಮಗಾರಿ ನಡೆಸಿ, ಕೈತೊಳೆದುಕೊಂಡರು. ಇದರಿಂದ ಪ್ರವಾಸಿ ತಾಣ ಯೋಜನೆ ನನೆಗುದಿಗೆ ಬಿದ್ದಿದ್ದು, ಬಳ್ಳಾರಿ ಜಾಲಿ ಬೆಳೆದು ಅರಣ್ಯವಾಗಿದೆ.
ಅಲ್ಲದೇ ಜಾನುವಾರು ಮೇಯುವ ತಾಣ ಮತ್ತು ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ’ ಎಂದು ಕೆಂಚನಗುಡ್ಡ ಗ್ರಾಮಸ್ಥರು ಆರೋಪಿ ಸುತ್ತಾರೆ.
ಬೆಂಗಳೂರಿನಲ್ಲಿರುವ ಇಲಾಖೆ ಅಧಿಕಾರಿಗಳು ಪ್ರವಾಸಿ ತಾಣದ ಅಭಿವೃದ್ಧಿಗೆ ಆಸಕ್ತಿ ತೋರದೇ ಇರುವುದರಿಂದ ತಾಲ್ಲೂಕಿನ ಜನರಲ್ಲಿ ಅಸಮಾಧಾನ ಮೂಡಿಸಿದೆ. –ಎಂ.ಬಸವರಾಜಯ್ಯ