ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಫ್ಟ್‌ವೇರ್‌ ಲೋಕದ ಸಂಕಟಗಳ ಕಥೆ ‘ಅಯನ’

Last Updated 7 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕೆಲಸ ಮಾಡುವವರು ಎಂದರೆ ದೊಡ್ಡ ವೇತನ ಪಡೆಯುವವರು, ಬಹಳ ಸಣ್ಣ ವಯಸ್ಸಿನಲ್ಲೇ ಬೆಂಗಳೂರಿನಲ್ಲೊಂದು ಫ್ಲ್ಯಾಟ್‌ ಖರೀದಿಸುತ್ತಾರೆ, ವಿದೇಶಗಳಿಗೆ ಆಗಾಗ ಹೋಗಿಬರುತ್ತಿರುತ್ತಾರೆ ಎಂಬ ಭಾವನೆ ಮೂಡುವುದು ಅಸಹಜವೇನೂ ಅಲ್ಲ. ಆದರೆ, ಸಾಫ್ಟ್‌ವೇರ್‌ ಊದ್ಯೋಗಿಗಳ ಜೀವನ ಇಷ್ಟು ಮಾತ್ರವೇನಾ? ಅವರ ಕಷ್ಟಗಳ ಬಗ್ಗೆ ಜನಸಾಮಾನ್ಯರಿಗೆ ಯಾರಾದರೂ ಹೇಳಿದ್ದಾರಾ?

ಅವರ ಕಷ್ಟ, ದುಃಖ, ಸಂಕಟಗಳ ಬಗ್ಗೆ ಇದುವರೆಗೆ ಎಷ್ಟು ಜನ ಕಥೆ ಹೇಳಿದ್ದಾರೆ ಅಥವಾ ಹೇಳಿಲ್ಲ ಎಂಬ ವಿಚಾರ ಒಂದೆಡೆ ಇಡೋಣ. ಈಗ ‘ಅಯನ’ ಎಂಬ ಸಿನಿಮಾದ ಮೂಲಕ ಈ ಕಥೆಯನ್ನು ಹೇಳುತ್ತಿದ್ದಾರೆ ನಿರ್ದೇಶಕ ಗಂಗಾಧರ ಸಾಲಿಮಠ. ಈ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ಐ.ಟಿ. ಕ್ಷೇತ್ರವನ್ನೇ ಸಿನಿಮಾದ ಕೇಂದ್ರವನ್ನಾಗಿಸಿಕೊಂಡು, ಆ ಕ್ಷೇತ್ರದಲ್ಲಿ ನವೋದ್ಯಮವೊಂದನ್ನು ಸ್ಥಾಪಿಸಲು ಮುಂದಾಗುವ ವ್ಯಕ್ತಿಯ ಸುತ್ತ ಕಥೆ ಹೆಣೆದಿರುವುದು ಇದೇ ಮೊದಲಿರಬೇಕು. ಸಾಲಿಮಠ ನಿರ್ದೇಶನದ ಮೊದಲ ಸಿನಿಮಾ ಇದು.

ಸಾಲಿಮಠ ಅವರು ‘ಚಂದನವನ’ದ ಜೊತೆ ಮಾತಿಗೆ ಸಿಕ್ಕಿದ್ದರು. ‘ಇಂಥದ್ದೊಂದು ಕಥೆಯನ್ನು ಸಿನಿಮಾ ಮೂಲಕ ಹೇಳಬೇಕು ಎಂದು ಅನಿಸಿದ್ದು ಏಕೆ’ ಎಂಬ ಪ್ರಶ್ನೆಯನ್ನು ಮಾತಿನ ಆರಂಭದಲ್ಲಿ ಸಾಲಿಮಠ ಮುಂದಿಡಲಾಯಿತು.

‘ನಾನು ಚಿತ್ರರಂಗಕ್ಕೆ ಹೊಸಬನಾಗಿರುವ ಕಾರಣ ನಾನು ಹೊಸದೇನನ್ನು ಹೇಳಬಲ್ಲೆ ಎಂಬ ಪ್ರಶ್ನೆ ಸಿನಿಮಾ ವೀಕ್ಷಕರಲ್ಲಿ ಇರುತ್ತದೆ. ಈ ಕಥೆಗೆ ಸಂಬಂಧಿಸಿದ ಕೆಲವು ವೈಯಕ್ತಿಕ ಅನುಭವಗಳು ನನ್ನಲ್ಲಿ ಇವೆ. ಹಲವರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾಗುತ್ತಾರೆ. ಹಾಗೆ ಎಂಜಿನಿಯರ್‌ ಆದವರಲ್ಲಿ ‘ನಾನೂ ಒಂದು ಕಂಪೆನಿ ಕಟ್ಟಬೇಕು’ ಎಂಬ ಕನಸು ಇರುತ್ತದೆ. ಕೆಲಸ ಬಿಟ್ಟು ಹೊರಗೆ ಬಂದು, ಕಂಪೆನಿ ಕಟ್ಟಲು ಮುಂದಾದವರ ಕಷ್ಟ, ಸುಖಗಳನ್ನು ನಾನು ಕಂಡಿದ್ದೇನೆ. ಇಂಥವರ ಸಂಕಟ, ಕಷ್ಟಗಳು ಹೆಚ್ಚಾಗಿ ಚರ್ಚೆಗೆ ಒಳಗಾಗಿಲ್ಲ. ಹಾಗಾಗಿ, ಇಂಥವರ ಬದುಕನ್ನು ಸಿನಿಮಾ ಮೂಲಕ ತೋರಿಸಬೇಕು ಎಂದು ನನಗೆ ಅನಿಸಿತು. ಜೊತೆಗೆ ಸಿನಿಮಾ ರಂಗದ ಸೆಳೆತ ಮೊದಲಿನಿಂದಲೂ ಇತ್ತು. ನನಗೆ ಈ ಸಿನಿಮಾ ಮಾಡಲು ಇದೇ ಒಂದು ಪ್ರಚೋದನೆ ಇದ್ದಿರಬಹುದು’ ಎನ್ನುತ್ತಾರೆ ಸಾಲಿಮಠ.

‘ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಅಂದರೆ ದೊಡ್ಡ ಸಂಬಳ, ಕಾರಿನಲ್ಲಿ ಸುತ್ತಾಟ. ಫ್ಲ್ಯಾಟ್‌ ಖರೀದಿ ಮಾತ್ರವೇ ಅಲ್ಲ. ಆದರೆ, ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಎಂದರೆ ಇಷ್ಟು ಮಾತ್ರ ಎಂಬ ಕಲ್ಪನೆ ಹಲವರಲ್ಲಿ ಇದೆ. ಅವರ ಜೀವನದಲ್ಲಿ ಕೂಡ ಬಹಳಷ್ಟು ಒತ್ತಡಗಳಿವೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಇತರ ಕ್ಷೇತ್ರಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡವರು ಅನುಭವಿಸುವ ಒತ್ತಡಗಳಿಗೂ, ಸಾಫ್ಟ್‌ವೇರ್‌ ಉದ್ಯೋಗಿ ಅನುಭವಿಸುವ ಒತ್ತಡಕ್ಕೂ ಬಹಳ ವ್ಯತ್ಯಾಸ ಇದೆ’ ಎಂದು ಮತ್ತೊಂದು ಮಾತನ್ನು ಅವರು ಸೇರಿಸಿದರು.

‘ಹಾಗಾದರೆ, ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ಕಷ್ಟ, ನೋವು, ಸಂಕಟಗಳು ಈ ಸಿನಿಮಾದಲ್ಲಿ ಜಾಗ ಪಡೆದಿವೆಯೇ’ ಎಂಬ ಪ್ರಶ್ನೆಯನ್ನು ಥಟ್ ಎಂದು ಸಾಲಿಮಠ ಅವರ ಮುಂದಿಡಲಾಯಿತು. ‘ಹೌದು. ಅವೆಲ್ಲವೂ ಈ ಸಿನಿಮಾದಲ್ಲಿ ಧ್ವನಿಸಿವೆ. ಬೆಳಿಗ್ಗೆ 10 ಗಂಟೆಗೆ ಆಫೀಸಿಗೆ ಹೋಗಿ, ಸಂಜೆ 6 ಗಂಟೆಗೆ ಆಫೀಸಿನಿಂದ ಮನೆಗೆ ಮರಳುವ ಸಾಫ್ಟ್‌ವೇರ್‌ ಉದ್ಯೋಗಿಯ ಕಥೆ ಇದಲ್ಲ. ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಅಲ್ಲಿಂದ ಹೊರಗೆ ಬಂದು, ತನ್ನ ಉಳಿತಾಯದ ಹಣ ಹೂಡಿಕೆ ಮಾಡಿ ಸಾಫ್ಟ್‌ವೇರ್‌ ಕ್ಷೇತ್ರದಲ್ಲೇ ನವೋದ್ಯಮವೊಂದನ್ನು ಆರಂಭಿಸಲು ಮುಂದಾದಾಗ ಅನುಭವಿಸುವ ಯಾತನೆಗಳ ಕಥೆ ಇದು. ಆತ ನವೋದ್ಯಮ ಆರಂಭಿಸಲು ಅನುಭವಿಸುವ ಕಷ್ಟ, ತನ್ನದೇ ಆದ ಉತ್ಪನ್ನವೊಂದನ್ನು ಸಿದ್ಧಪಡಿಸುವಾಗ ಎದುರಿಸುವ ಸವಾಲು, ತನ್ನ ಕಂಪೆನಿಗಾಗಿ ಒಂದು ತಂಡವನ್ನು ಕಟ್ಟಲು ವಹಿಸುವ ಶ್ರಮದ ಕಥೆ ಇಲ್ಲಿದೆ’ ಎಂಬ ಉತ್ತರ ನೀಡಿದರು ಸಾಲಿಮಠ. ಅಂದಹಾಗೆ, ಸಾಲಿಮಠ ಅವರೂ ಈ ಹಿಂದೆ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದವರು. ಈಗ ಪೂರ್ಣಪ್ರಮಾಣದಲ್ಲಿ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಧ್ಯಮ ವರ್ಗದಲ್ಲಿ ಜನಿಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆದ ಯುವಕರಿಗೆ, ಅವರ ತಂದೆ–ತಾಯಿಗಳಿಗೆ ಇಷ್ಟವಾಗುವಂಥ ಅಂಶಗಳೂ ಈ ಸಿನಿಮಾದಲ್ಲಿ ಇವೆ ಎನ್ನುತ್ತಾರೆ ಅವರು. ‘ಈ ಸಿನಿಮಾದಲ್ಲಿನ ಕಥೆ ಇವರೆಲ್ಲರಿಗೂ ಸಂಬಂಧಿಸಿದ್ದು. ಸಿನಿಮಾ ವೀಕ್ಷಿಸಿದ ನಂತರ, ಈ ಕ್ಷೇತ್ರದಲ್ಲಿ ಹೀಗೆಲ್ಲ ಇದೆಯಾ ಎಂದು ಚಕಿತರಾಗುತ್ತಾರೆ. ಇಲ್ಲಿನ ಪಾತ್ರಗಳ ಜೊತೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ನಾನು ಈ ಸಿನಿಮಾವನ್ನು ಆದಷ್ಟು ಮಟ್ಟಿಗೆ ವಾಸ್ತವಕ್ಕೆ ಹತ್ತಿರವಾಗಿ ರೂಪಿಸಿದ್ದೇನೆ. ಹಾಗಂತ, ಸಿನಿಮಾ ಮಾರುಕಟ್ಟೆಯನ್ನು ಮಾತ್ರ ಆಲೋಚನೆಯಲ್ಲಿ ಇಟ್ಟುಕೊಂಡು ಇದನ್ನು ಮಾಡಿಲ್ಲ. ನನಗೊಂದು ಕಥೆ ಹೇಳಬೇಕಿತ್ತು, ಹೇಳಿದ್ದೇನೆ. ನಾನು ಈ ಹಿಂದೆ ಯಾವುದೇ ಸಿನಿಮಾಗಳಲ್ಲಿ ಕೆಲಸ ಮಾಡಿದವ ಅಲ್ಲ. ಜನ ಏನನ್ನು ಕಂಡು ಚಪ್ಪಾಳೆ ಹೊಡೆಯುತ್ತಾರೆ, ಏನನ್ನು ನೋಡಿ ಶಿಳ್ಳೆ ಹಾಕುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಈ ಕಥೆ ಹೇಳಬೇಕು ಎಂಬ ಉದ್ದೇಶದಿಂದ ಸಿನಿಮಾ ಮಾಡಿದ್ದೇನೆ’ ಎಂದರು.

ಈ ಸಿನಿಮಾದ ಟ್ರೇಲರ್‌ಅನ್ನು ಚಿತ್ರತಂಡ ಈ ಹಿಂದೆಯೇ ಬಿಡುಗಡೆ ಮಾಡಿದೆ. ಟ್ರೇಲರ್ ಗಮನಿಸಿದರೆ, ಈ ಸಿನಿಮಾದಲ್ಲಿ ಹೀರೊ ಇಲ್ಲ. ಬದಲಿಗೆ, ಪ್ರಧಾನ ಪಾತ್ರಗಳು ಮಾತ್ರ ಇವೆ ಎಂದು ಭಾಸವಾಗುತ್ತದೆ. ‘ಹೀರೊ ಇಲ್ಲದಿರುವುದು ಪ್ರಜ್ಞಾಪೂರ್ವಕ ತೀರ್ಮಾನವೇ’ ಎಂದು ಪ್ರಶ್ನಿಸಿದಾಗ: ‘ಹೌದು, ಸಿನಿಮಾವು ವಾಸ್ತವಕ್ಕೆ ಹತ್ತಿರವಾಗಿರಲಿ ಎಂಬ ಉದ್ದೇಶದಿಂದ ಪ್ರಜ್ಞಾಪೂರ್ವಕವಾಗಿಯೇ ಹೀಗೆ ಮಾಡಿದ್ದೇವೆ. ನಾನು ಸಿನಿಮಾ ಕಥೆಯನ್ನು ಹಿರೋಯಿಕ್ ಆಗಿ ತೋರಿಸಬಹುದಿತ್ತು. ಆದರೆ, ಹಾಗೆ ಮಾಡಿಲ್ಲ. ಆಕಾಶದೆತ್ತರಕ್ಕೆ ಬೆಳೆಯುವ ಶೇಕಡ 1ರಷ್ಟು ಜನರ ಕಥೆ ಇದರಲ್ಲಿ ಇಲ್ಲ. ಇನ್ನುಳಿದ ಶೇಕಡ 99ರಷ್ಟು ಜನರ ಕಥೆ ಇಲ್ಲಿದೆ’ ಎಂದರು.

‘ನವೋದ್ಯಮಗಳ ಯಶಸ್ಸು ಅಥವಾ ಸೋಲು ಮಾರುಕಟ್ಟೆ ಶಕ್ತಿಗಳನ್ನೂ ಅವಲಂಬಿಸಿರುತ್ತದೆ. ಮಾರುಕಟ್ಟೆ ಶಕ್ತಿಗಳ ಬಗ್ಗೆ ಸಿನಿಮಾದಲ್ಲಿ ಉಲ್ಲೇಖ ಬರುತ್ತದೆಯೇ’ ಎಂದು ಕೇಳಿದರೆ ‘ಹೌದು’ ಎನ್ನುತ್ತಾರೆ ನಿರ್ದೇಶಕರು. ‘ಅವುಗಳನ್ನು ನೀವು ಈ ಸಿನಿಮಾದಲ್ಲಿ ನೋಡಬಹುದು. ನಾಯಕ ಮಾರುಕಟ್ಟೆಯ ಶಕ್ತಿಗಳಿಂದ ಅನುಭವಿಸುವ ಕಷ್ಟ, ಸುಖ, ಯಾತನೆಗಳೆಲ್ಲವನ್ನೂ ಸ್ಪಷ್ಟವಾಗಿ ತೋರಿಸಲಾಗಿದೆ. ಮಾರುಕಟ್ಟೆ ಶಕ್ತಿಗಳ ಬಗ್ಗೆ ಆಳವಾದ ಅರಿವು ಇಲ್ಲದವರಿಗೂ ಒಂದಷ್ಟು ವಿಚಾರ ಗೊತ್ತಾಗುವಂತೆ ತೋರಿಸಿದ್ದೇವೆ’ ಎಂದರು.

ಸ್ನೇಹ, ಕೌಟುಂಬಿಕ ಸಂಬಂಧಗಳು ಹಾಗೂ ನವೋದ್ಯಮ ಈ ಸಿನಿಮಾದಲ್ಲಿ ಧ್ವನಿ ಪಡೆದಿವೆ. ಈ ಸಿನಿಮಾದಲ್ಲಿ ರೊಮ್ಯಾನ್ಸ್ ಕೂಡ ಇದೆ. ಆದರೆ ಇದು ರೊಮ್ಯಾಂಟಿಕ್ ಸಿನಿಮಾ ಅಲ್ಲ ಎಂಬುದನ್ನು ಹೇಳಲು ಸಾಲಿಮಠ ಅವರು ಮರೆಯಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT