ಲಕ್ಷ್ಮೇಶ್ವರ: ಪಟ್ಟಣ ತಾಲ್ಲೂಕು ಕೇಂದ್ರ ಆಗುತ್ತದೆ ಎಂಬ ಕನಸು ನನಸಾಗುವ ಕಾಲ ಸಮೀಪಿಸಿದ್ದು, 2018ರ ಜನವರಿ ಯಿಂದ ನೂತನ ತಾಲ್ಲೂಕು ಅಸ್ತಿತ್ವಕ್ಕೆ ಬರಲಿದೆ. ಈ ಕುರಿತು ಸರ್ಕಾರ ನೂತನ ತಾಲ್ಲೂಕುಗಳಿಗೆ ಸಂಬಂಧಿಸಿ ಗೆಜೆಟ್ ಹೊರಡಿಸಿರುವುದು ಇದಕ್ಕೆ ಪುಷ್ಠಿ ನೀಡಿದೆ.
ಸುದೀರ್ಘ ಹೋರಾಟ: 40 ವರ್ಷ ಗಳಿಂದ ಲಕ್ಷ್ಮೇಶ್ವರ ತಾಲ್ಲೂಕು ಕೇಂದ್ರ ಆಗಬೇಕು ಎಂದು ಹೋರಾಟ ನಡೆ ದಿತ್ತು. ಲಕ್ಷ್ಮೇಶ್ವರದ ಅಭಿವೃದ್ಧಿಯ ಹರಿ ಕಾರ ಎಂದೇ ಖ್ಯಾತರಾಗಿರುವ ಬಸೆಟೆಪ್ಪ ತಟ್ಟಿ ಅವರು ತಾಲ್ಲೂಕು ಹೋರಾಟಕ್ಕೆ ಮುನ್ನುಡಿ ಬರೆದರು. ನಂತರ ಬಂದ ಪುರಸಭೆಯ ಎಲ್ಲ ಅಧ್ಯಕ್ಷರು, ಮಾಜಿ ಶಾಸಕರು ಹಾಗೂ ಲಕ್ಷ್ಮೇಶ್ವರದ ಅನೇಕ ಹಿರಿಯರು ಹೋರಾಟಕ್ಕೆ ಇಳಿದಿದ್ದರು.
ಹೊಸ ತಾಲ್ಲೂಕು ರಚನೆ ಕುರಿತು ವಾಸುದೇವರಾವ್ ಸಮಿತಿ (1975), ಹುಂಡೇಕಾರ ಸಮಿತಿ (1987) ನಂತ ರದ ಪಿ.ಸಿ. ಗದ್ದಿಗೌಡ್ರ ಮತ್ತು ಎಂ.ಬಿ. ಪ್ರಕಾಶ ಅವರ ತಾಲ್ಲೂಕು ಪುನರ್ ವಿಂಗಡಣಾ ಸಮಿತಿಗಳು ಲಕ್ಷ್ಮೇಶ್ವರ ತಾಲ್ಲೂಕು ಕೇಂದ್ರ ಆಗಲು ಎಲ್ಲ ಅರ್ಹತೆ ಹೊಂದಿದೆ ಎಂದು ಶಿಫಾರಸು ಮಾಡಿದ್ದವು.
ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರು ಜಿಲ್ಲಾವಿಂಗಡಣೆ ಮಾಡಿದ ಸಂದರ್ಭದಲ್ಲಿ ಲಕ್ಷ್ಮೇಶ್ವರ ತಾಲ್ಲೂಕು ಆಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಆಗಲಿಲ್ಲ. ನಂತರ ಎಸ್.ಎಂ. ಕೃಷ್ಣಾ ಅವಧಿಯಲ್ಲಿ ವಿಶೇಷ ತಹಶೀಲ್ದಾರ್ ಕಚೇರಿ, ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಉಪನೋಂದಣಿ ಅಧಿಕಾರಿಗಳ ಕಚೇರಿ ಆರಂಭಿಸುವ ಮೂಲಕ ಲಕ್ಷ್ಮೇಶ್ವರ ತಾಲ್ಲೂಕು ಆಗಲು ಅರ್ಹ ಎಂಬ ಮುದ್ರೆಯನ್ನು ಒತ್ತಲಾಯಿತು.
ಜಗದೀಶ ಶೆಟ್ಟರ 2013ರಲ್ಲಿ ಹೊಸ ತಾಲ್ಲೂಕುಗಳ ಬೇಡಿಕೆಗೆ ಸ್ಪಂದಿಸಿ 43 ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಿದ್ದರು. ಅಷ್ಟರಲ್ಲಿ ಅವರ ಸರ್ಕಾ ರದ ಅವಧಿ ಕೊನೆಗೊಂಡಿದ್ದರಿಂದ ಮತ್ತೆ ತಾಲ್ಲೂಕು ಬೇಡಿಕೆ ನನೆಗುದಿಗೆ ಬಿದ್ದಿತು. ಆದರೆ, ಮುಖ್ಯಮಂತ್ರಿ ಸಿದ್ಧರಾಮಯ್ಯ 43 ತಾಲ್ಲೂಕುಗಳಿಗೆ ಮತ್ತೆ ಮೂರನ್ನು ಸೇರಿಸಿ 49 ತಾಲ್ಲೂಕುಗಳನ್ನು ಮಾಡಲು ಶಿಫಾರಸು ಮಾಡಿದರು. ಇದರ ಫಲವಾಗಿ ಇಂದು ಲಕ್ಷ್ಮೇಶ್ವರ ನೂತನ ತಾಲ್ಲೂಕಾಗಿ ಅನುಷ್ಠಾನಕ್ಕೆ ಬರುತ್ತಿರು ವುದು ಜನತೆಯಲ್ಲಿ ಹರ್ಷ ಮೂಡಿಸಿದೆ.
ಈಗಾಗಲೇ ಲಕ್ಷ್ಮೇಶ್ವರದಲ್ಲಿ ಪ್ರಥಮ ದರ್ಜೆ ನ್ಯಾಯಾಲಯ, ವಿಶೇಷ ತಹಶೀ ಲ್ದಾರ್ ಕಚೇರಿ, ಉಪನೋಂದಣಾಧಿ ಕಾರಿ ಕಚೇರಿ, ನಗರ ಭೂಮಾಪನ ಇಲಾಖೆ, ಕೃಷಿ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ, ಬಸ್ ಡಿಪೋ, ಪಶು ಸಂಗೋಪನಾ ಇಲಾಖೆಗಳು ಕಾರ್ಯ ರ್ನಿಹಿಸುತ್ತಿವೆ. ಜನವರಿ ಒಳಗಾಗಿ ಬಾಕಿ ಇರುವ ಕಚೇರಿಗಳು ಅನುಷ್ಠಾನಕ್ಕೆ ಬರ ಲಿವೆ ಎಂಬುದು ಖಾತ್ರಿ ಆಗಿದೆ.
ಲಕ್ಷ್ಮೇಶ್ವರ ಪುರಸಭೆ ಸೇರಿ ಯಳವತ್ತಿ, ಮಾಗಡಿ, ಗೊಜನೂರು, ರಾಮಗಿರಿ, ಪುಟಗಾಂವ್ಬಡ್ನಿ, ಬಟ್ಟೂರು, ಆದರ ಹಳ್ಳಿ, ಅಡರಕಟ್ಟಿ, ಶಿಗ್ಲಿ, ಹುಲ್ಲೂರು, ದೊಡ್ಡೂರು, ಗೋವನಾಳ, ಸೂರಣಗಿ, ಬಾಲೆಹೊಸೂರು ಗ್ರಾಮ ಪಂಚಾಯ್ತಿಗಳ ಒಟ್ಟು 32 ಊರುಗಳು ಲಕ್ಷ್ಮೇಶ್ವರ ತಾಲ್ಲೂಕು ವ್ಯಾಪ್ತಿಯಲ್ಲಿ ಬರಲಿವೆ.
ಈ ಕುರಿತು ಮಾಜಿ ಶಾಸಕ ಮತ್ತು ತಾಲೂಕು ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಜಿ.ಎಂ.ಮಹಾಂತಶೆಟ್ಟರ ‘ಲಕ್ಷ್ಮೇ ಶ್ವರ ತಾಲ್ಲೂಕು ಹೋರಾಟಕ್ಕೆ ಸುದೀರ್ಘ ಹೋರಾಟ ಇದ್ದು ಕೊನೆಗೂ ಹೋರಾ ಟಕ್ಕೆ ಬೆಲೆ ಸಿಕ್ಕಿದೆ’ ಎಂದರು.
* *
ಲಕ್ಷ್ಮೇಶ್ವರ ತಾಲ್ಲೂಕು ರಚನೆಗೆ ಸಂಬಂಧಿಸಿ ನಕ್ಷೆಯನ್ನು ಅಧಿಕೃತವಾಗಿ ನಿರ್ಧರಿಸಲಾಗಿದೆ. 2018 ಜನವರಿಯಿಂದ ನೂತನ ತಾಲ್ಲೂಕು ಅಸ್ತಿತ್ವಕ್ಕೆ ಬರಲಿದೆ
ಎ.ಡಿ.ಅಮರಾವಡಗಿ
ತಹಶೀಲ್ದಾರ್, ಶಿರಹಟ್ಟಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.