ಜಮಖಂಡಿ: ನದಿಗಳು ಭಾರತದ ಜೀವನಾಡಿಗಳು. ಆದರೆ, ನದಿಗಳು ಈಗ ಬರಿದಾಗುತ್ತಿವೆ. ಕಾರಣ ನದಿಗಳು ಬರಿದಾಗುವುದನ್ನು ತಡೆಗಟ್ಟಲು ಜನರಲ್ಲಿ ಅರಿವು ಮೂಡಿಸಲು ರಾಷ್ಟ್ರದಾದ್ಯಂತ ನಡೆಯುತ್ತಿರುವ ಆಂದೋಲನದ ಅಂಗವಾಗಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಬೃಹತ್ ಜನಜಾಗೃತಿ ಜಾಥಾ ಜರುಗಿತು.
ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಓಲೆಮಠದ ಡಾ.ಚನ್ನಬಸವ ಶ್ರೀಗಳು ಬಲೂನಗಳನ್ನು ಹಾರಿಬಿಡುವ ಮೂಲಕ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ನಂತರ ಬೃಹತ್ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದು ಐತಿಹಾಸಿಕ ಪೋಲೊ ಮೈದಾನದ ತಾಲ್ಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತು.
ಪುಷ್ಪಾತಾಯಿ ಪ್ರಾಥಮಿಕ ಶಾಲೆ, ರಾಯಲ್ ಪ್ಯಾಲೇಸ್ ಸ್ಕೂಲ್, ಸರ್ಕಾರಿ ಪಿಬಿ ಹೈಸ್ಕೂಲ್, ಜಿಜಿ ಹೈಸ್ಕೂಲ್, ಬಿಎಲ್ಡಿಇ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಜ್ನಾನಗಂಗೋತ್ರಿ, ಸಾಯಿಸಂಕಲ್ಪ ಸೇರಿದಂತೆ 15 ಶಾಲೆಗಳ ಸುಮಾರು 2 ಸಾವಿರಕ್ಕೂ ಮಿಕ್ಕಿ ಶಾಲಾ ಮಕ್ಕಳು ಬ್ಯಾನರ್ ಹಾಗೂ ಭಿತ್ತಿಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತ ಜಾಥಾದಲ್ಲಿ ಪಾಲ್ಗೊಂಡಿದ್ದರು.
RALLY FOR RIVER ವಾಕ್ಯ ರೂಪದಲ್ಲಿ ಕುಳಿತು ಸಾರ್ವಜನಿಕರ ಗಮನ ಸೆಳೆದದ್ದು ಜಾಥಾದ ವಿಶೇಷ ಆಕರ್ಷಣೆಯಾಗಿತ್ತು. ಶಾಸಕ ಸಿದ್ದು ನ್ಯಾಮಗೌಡ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮಾಜಿ ಶಾಸಕ ಬಾಬುರೆಡ್ಡಿ ತುಂಗಳ ಮಾತನಾಡಿದರು. ಉದ್ದಿಮೆದಾರ ಜಗದೀಶ ಗುಡಗುಂಟಿ, ಡಾ.ಎಚ್.ಜಿ. ದಡ್ಡಿ ಮಾತನಾಡಿದರು.
ತ್ತಿನಕಂತಿ ಮಠದ ಶಿವಲಿಂಗ ಶ್ರೀಗಳು, ಕಲ್ಯಾಣ ಮಠದ ಗೌರಿಶಂಕರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ತಹಶೀಲ್ದಾರ್ ಪ್ರಶಾಂತ ಚನಗೊಂಡ, ಆಶಾತಾಯಿ ಗುಡಗುಂಟಿ, ಕಸ್ತೂರಿ ಹೊಟ್ಟಿ, ವಕೀಲ ಎಸ್.ಎಂ. ಜತ್ತಿ, ವೈಶಾಲಿ ಗೊಂದಿ, ಡಾ.ಜಿ.ಎನ್. ಸನದಿ, ನಾಗಪ್ಪ ಸನದಿ, ಎಂ.ಸಿ. ಗೊಂದಿ, ಮಾಜಿ ಶಾಸಕ ಸಿದ್ದು ಸವದಿ, ಈಶಾ ಫೌಂಡೇಷನ್ನ ಸಂಚಾಲಕಿ ಶಿಲ್ಪಾ ಹಿರೇಮಠ ಇದ್ದರು. ಗೌರಿ ಗುಡಗುಂಟಿ ಸ್ವಾಗತಿಸಿ, ನಿರೂಪಿಸಿದರು. ನದಿಗಳ ರಕ್ಷಣೆಗೆ ಆಂದೋಲನಕ್ಕೆ ಬೆಂಬಲಾರ್ಥವಾಗಿ 8000980009 ಗೆ ಮಿಸ್ಡ್ ಕಾಲ್ ಕೊಡಲು ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.