ಮಳೆ ಕೊರತೆಯಿಂದ ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಈ ಬಾರಿ ಮುಂಗಾರಿನಲ್ಲಿ ಅರ್ಧದಷ್ಟೂ ಬಿತ್ತನೆ ಆಗಿಲ್ಲ. ಬೀಜಗಳು ಮೊಳಕೆಯ ಹಂತದಲ್ಲೇ ಬಾಡುತ್ತಿವೆ. ಆದರೆ, ಬರ ಗಾಲದ ಪ್ರತೀಕದಂತಿರುವ ಜಾಲಿಗಿಡಗಳು ಮಾತ್ರ ಹೊಲಗಳ ಬದು ವಿನಲ್ಲಿ, ಹಳ್ಳಕೊಳ್ಳಗಳ ಪಕ್ಕದಲ್ಲಿ ಸಮೃದ್ಧ ವಾಗಿ ಬೆಳೆದು ನಿಂತಿವೆ. ಜಮೀನಿನಲ್ಲಿದ್ದರೆ ಅವು ರೈತರಿಗೆ ಶಾಪ. ಕೆಲವರಿಗೆ ಇದೇ ಬದು ಕಿಗೆ ಆಧಾರ. ಜಾಲಿಗಿಡಗಳನ್ನು ಕಡಿದು, ಸುಟ್ಟು ಇದ್ದಿಲು ತಯಾರಿಸಿ ಜೀವನ ನಿರ್ವ ಹಣೆ ಮಾಡುವವರಿದ್ದಾರೆ.
ಜಾಲಿಗಿಡಗಳನ್ನು ಕಡಿಯುವುದು ಅಷ್ಟು ಸುಲಭವಲ್ಲ. ಮೈತುಂಬಾ ಮುಳ್ಳಿ ನಿಂದ ತುಂಬಿರುವ ಈ ಗಿಡಗಳನ್ನು ಕಡಿಯಲು ಅಷ್ಟೇ ಕೌಶಲ ಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಮೈಮೇಲೆ ಮುಳ್ಳಿ ನಿಂದ ತರಚಿದ ಗಾಯವಾಗುತ್ತದೆ. ‘ಮೊದಲು ಜಾಲಿಗಿಡ ಇರುವ ಸ್ಥಳ ತಲುಪಲು ದಾರಿ ಮಾಡಿಕೊಳ್ಳಬೇಕು.
ನಂತರ ಅದರ ಕೊಂಬೆಗಳನ್ನು ಕತ್ತರಿಸಿ, ಎಚ್ಚರಿಕೆಯಿಂದ ಬದಿಗೆ ಸರಿಸಬೇಕು. ನಂತರ ಬುಡ ಕಡಿದು, ಕಟ್ಟಿಗೆಯನ್ನು ಪೊದೆಯಿಂದ ಬಿಡಿಸಿಕೊಳ್ಳಬೇಕು. ಮೇಲ್ನೋಟಕ್ಕೆ ಇದೆಲ್ಲವೂ ಸರಳವಾಗಿ ಕಂಡರೂ, ಬಹಳ ತ್ರಾಸದಾಯಕ ಕೆಲಸ.
‘ಬದುಕಲು ಬೇರೆ ದಾರಿ ಇಲ್ಲದೆ ಈ ಉದ್ಯೋಗ ಮಾಡುತ್ತೇವೆ. ಜಮೀನಿನ ಬದು, ಹಳ್ಳಕೊಳ್ಳಗಳನ್ನು ತಿರುಗಾಡಿ ಕಟ್ಟಿಗೆ ಸಂಗ್ರಹಿಸಿ ಸುಟ್ಟರೆ ಒಂದಿಷ್ಟು ಹಣ ಸಿಗುತ್ತದೆ’ ಎನ್ನತ್ತಾರೆ ಈ ಕಾಯದಲ್ಲಿ ತೊಡಗಿರುವ ತಾಲ್ಲೂಕಿನ ನಿಂಗಪ್ಪ ಶಿವಪ್ಪ ಅರಣಶಿಕಾರಿ ಹಾಗೂ ಶಿವಪ್ಪ ಅರಣಶಿಕಾರಿ.
‘ಒಂದು ಬುಟ್ಟಿಯಷ್ಟು ಇದ್ದಲು ಸಿಗ ಬೇಕಾದರೆ ಒಂದಿಡೀ ದಿನ ಜಾಲಿ ಮುಳ್ಳಿ ನೊಂದಿಗೆ ಸೆಣಸಿ ಕಟ್ಟಿಗೆ ಕಡಿಯಬೇಕು. ಹಸಿ ಕಟ್ಟಿಗೆಯನ್ನು ಸುಡಲು ಸೀಮೆಎಣ್ಣೆ ಬೇಕಾಗುತ್ತದೆ. 40ರಿಂದ 50 ಚೀಲದಷ್ಟು ಇದ್ದಿಲು ತಯಾರಿಸಲು 10 ಲೀ. ಸೀಮೆ ಎಣ್ಣೆ ಬೇಕಾಗುತ್ತದೆ.
1 ಕೆ.ಜಿ ಇದ್ದಲಿಗೆ ₹10ರಂತೆ ಮಾರಾಟ ಮಾಡುತ್ತೇವೆ. ಲಾಭ, ನಷ್ಟ ಎಲ್ಲ ಕೂಡಿ, ಕಳೆದರೂ ಕೈಯಲ್ಲಿ ಐದು ಪೈಸೆ ಉಳಿಯುವುದಿಲ್ಲ. ಹೊಟ್ಟೆಗೆ ಕೊರತೆ ಇಲ್ಲದಂತೆ ಹೇಗೋ ಜೀವನ ನಡೆದಿದೆ. ಬೇರೆ ಉದ್ಯೋಗ ಗೊತ್ತಿಲ್ಲ. ಜಮೀನೂ ಇಲ್ಲ. ಹೀಗಾಗಿ ಇಡೀ ಕುಟುಂಬವೇ ಇದರಲ್ಲಿ ತೊಡಗಿ ಕೊಂಡಿದೆ. ಜಾಲಿ ಕಟ್ಟಿಗೆ ಹುಡುಕುತ್ತ ಆಗಾಗ್ಗ ಕಟ್ಟಿಕೊಂಡ ಗುಡಿಸಲನ್ನು ಬಿಚ್ಚಿಕೊಂಡು ಸ್ಥಳ ಬದಲಾಯಿಸುತ್ತಿರು ತ್ತೇವೆ’ ಎಂದು ಅವರು ತಮ್ಮ ಬದುಕಿನ ಬವಣೆ ತೆರೆದಿಟ್ಟರು.
‘ಇದ್ದಿಲು ಇಸ್ತ್ರಿ ಬಹಳ ಜನಪ್ರಿಯ. ವಿದ್ಯುತ್ ಸೌಲಭ್ಯ ಇದ್ದರೂ ನಗರದಲ್ಲಿ ಸಾಕಷ್ಟು ಜನರು ಇದ್ದಲು ಇಸ್ತ್ರಿ ಅಂಗಡಿ ಯಲ್ಲೇ ಬಟ್ಟೆಗಳನ್ನು ಕೊಟ್ಟು ಇಸ್ತ್ರಿ ಮಾಡಿ ಸುತ್ತಾರೆ. ಹೀಗಾಗಿ, ಲಾಂಡ್ರಿ ಅಂಗಡಿ ಗಳನ್ನು ಇಟ್ಟುಕೊಂಡವರು ನಮ್ಮಿಂದ ಇದ್ದಿಲು ಖರೀದಿಸುತ್ತಾರೆ.
ನಗರದಿಂದ ಸಗಟು ಇದ್ದಿಲು ವ್ಯಾಪಾರಿಗಳು ನಾವಿದ್ದ ಲ್ಲಿಗೆ ಬಂದು ಖರೀದಿಸಿಕೊಂಡು ಹೋಗು ತ್ತಾರೆ. ಕೆಲವರು ನೀರು ಕಾಯಿಸಲು ಕಟ್ಟಿಗೆ ಒಲೆಯ ಬಾಯ್ಲರ್ ಅಳವಡಿಸಿ ರುತ್ತಾರೆ. ಇದಕ್ಕೂ ಇದ್ದಿಲು ಬೇಕಾಗು ತ್ತದೆ. ಇದ್ದಿಲಿಗೆ ಹಿಂದೆಯೂ ಬೇಡಿಕೆ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ. ಜಾಲಿ ಕಟ್ಟಿಗೆ ಇರುವ ತನಕ ನಾವೂ ಬದುಕುತ್ತೇವೆ’ ಎಂದು ನಿಂಗಪ್ಪ ನಿಟ್ಟುಸಿರು ಬಿಟ್ಟರು.
‘ನಮ್ಮ ಪರಿಸ್ಥಿತಿ ಮಕ್ಕಳಿಗೆ ಬಾರದಿ ರಲಿ ಎಂದು ಸರ್ಕಾರಿ ಶಾಲೆಗೆ ಸೇರಿಸಿ ದ್ದೇವೆ. ದಿನಕ್ಕೆ ₹150ರಿಂದ ₹ 200 ದುಡಿಮೆಯಾಗುತ್ತದೆ. ಸರ್ಕಾರ ನಮಗೆ ಕನಿಷ್ಠ ಆಶ್ರಯ ಮನೆಗಳನ್ನಾದರೂ ನಿರ್ಮಿಸಿಕೊಡಬೇಕು’ ಎಂದು ಬಸಪ್ಪ ಅರಣಸಿಕಾರಿ ಹಾಗೂ ಜಯಶ್ರೀ ಅರಣ ಶಿಕಾರಿ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.