ಹಾವೇರಿ: ಚರಂಡಿ ಮೇಲೆಯೇ ಅಂಗಡಿ–ಬಂಡಿಗಳು, ಒತ್ತುವರಿಯಾದ ಚರಂಡಿ– ರಾಜಕಾಲುವೆ, ನಿಷೇಧ ಗೊಳ್ಳದ ಪ್ಲಾಸ್ಟಿಕ್–ಗುಟ್ಕಾ, ಅರ್ಧಂ ಬರ್ಧ ಮತ್ತು ಅವೈಜ್ಞಾನಿಕ ಕಾಮಗಾರಿ ಗಳು, ಕಂಡ ಕಂಡಲ್ಲಿ ಎಸೆದ ಕುಡಿ ಯುವ ನೀರಿನ ಬಾಟಲಿಗಳು, ಚರಂಡಿಗೆ ತ್ಯಾಜ್ಯ ಸುರಿಯುವ ಮಂದಿ, ಕಸ ಎರಚಾಡಿ ರಾಡಿ ಮಾಡಿದ ಹಂದಿ...
ಸತತ ಬರದ ಬಳಿಕ ಬಂದ ಉತ್ತಮ ಮಳೆಗೆ ನಗರವೇ ಕಂಗೆಡುವಂತೆ ಮಾಡಿದ ಅಂಶಗಳು. ಪ್ರತಿವರ್ಷವೂ ಇದೇ ಸಮಸ್ಯೆ ನಗರದಲ್ಲಿ ಕಾಡಿದರೂ, ಶಾಶ್ವತ ಪರಿಹಾರ ಕಾರ್ಯ ಮಾತ್ರ ನಡೆದಿಲ್ಲ!
ಒತ್ತುವರಿ ತೆರವು: ‘ಹಲವೆಡೆ ಚರಂಡಿ ಹಾಗೂ ರಾಜಕಾಲುವೆ ಮೇಲೆಯೇ ಬಂಡಿ, ಅಂಗಡಿ ಇತ್ಯಾದಿಗಳಿವೆ. ಇದ ರಿಂದ ಚರಂಡಿ ಒಳಗಡೆ ತ್ಯಾಜ್ಯ ನಿಂತು ಕಟ್ಟಿಕೊಂಡಿತ್ತು. ಇದನ್ನು ಸ್ವಚ್ಛಗೊಳಿ ಸಲು ಕಷ್ಟಕರವಾಯಿತು. ಇಂತಹ ಒತ್ತು ವರಿಯನ್ನು ತೆರವು ಮಾಡಬೇಕಾಗಿದೆ. ಆಗ ಮಳೆ ನೀರು ಚರಂಡಿ ಮೂಲಕ ಸರಾಗವಾಗಿ ಹರಿದು ಹೋಗಲು ಸಾಧ್ಯ’ ಎನ್ನುತ್ತಾರೆ ನಗರಸಭೆಯ ಪೌರಾಯುಕ್ತ ಶಿವಕುಮಾರಯ್ಯ.
‘ಈ ಬಾರಿಯ ಶನಿವಾರವೇ ದೊಡ್ಡ ಮಳೆಯಾಗಿದೆ. ಮಳೆಯ ನೀರಿನ ಜೊತೆಗೆ ಪ್ಲಾಸ್ಟಿಕ್, ಥರ್ಮೋಕೋಲ್, ನೀರಿನ ಬಾಟಲಿ ಮತ್ತಿತರ ವ್ಯರ್ಥ ವಸ್ತುಗಳು ಬಂದಿದ್ದು, ಅಲ್ಲಲ್ಲಿ ಕಟ್ಟಿ ಕೊಂಡಿವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಪ್ರಮುಖವಾಗಿ ಚರಂಡಿಗೆ ತ್ಯಾಜ್ಯ ಸುರಿಯುವುದನ್ನು ಬಿಡಬೇಕು’ ಎನ್ನುತ್ತಾರೆ ನಗರಸಭೆ ಸದಸ್ಯ ಗಣೇಶ ಬಿಷ್ಟಣ್ಣನವರ.
ಪ್ಲಾಸ್ಟಿಕ್–ಗುಟ್ಕಾ: 40 ಎಂ.ಎಂ. ಮೈಕ್ರಾನ್ಗಿಂತ ಕಡಿಮೆಯ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಒಳಗಾಗಿದೆ. ಆದರೂ ಅವ್ಯಾಹತವಾಗಿ ಮಾರಾಟ ನಡೆಯುತ್ತಿದೆ. ಗುಟ್ಕಾ ನಿಷೇಧ ವಿದ್ದರೂ, ವ್ಯಾಪಕವಾಗಿ ಮಾರಾಟ ವಾಗುತ್ತಿದೆ. ಗುಟ್ಕಾ ತಿಂದು ಎಸೆದೆ ಸ್ಯಾಚೆಟ್ಗಳೇ ಚರಂಡಿಯ ಕೆಲವೆಡೆ ಸಿಕ್ಕಿ ಹಾಕಿಕೊಂಡಿವೆ. ಹೀಗೆ ಮಳೆ ನೀರು ಕೊಚ್ಚಿಕೊಂಡು ತಂದ ತ್ಯಾಜ್ಯ ಗೂಗಿ ಕಟ್ಟೆ ಮತ್ತಿತರೆಡೆ ಚರಂಡಿಗಳಲ್ಲಿ ಕಟ್ಟಿ ಕೊಂಡಿವೆ. ಇದರ ವಿಲೇವಾರಿಗೆ ನಗರ ಸಭೆ ಪೌರಕಾರ್ಮಿಕರು ಹರಸಾಹಸ ಪಡಬೇಕಾಗುತ್ತಿದೆ.
‘ಕಳೆದ ಕೆಲವು ದಿನಗಳಿಂದ ಸತತ ವಾಗಿ ಚರಂಡಿ ಸ್ವಚ್ಛತೆ ಮಾಡಲಾಗು ತ್ತಿದೆ. ಇದರಿಂದ ಶನಿವಾರದ ಮಳೆಗೆ ತೀವ್ರ ಸಮಸ್ಯೆ ಉಂಟಾಗಲಿಲ್ಲ. ಆದರೆ, ಒತ್ತುವರಿಯಾದ ಮುಲ್ಲಾನ್ ಕೆರೆ, ರಾಜಕಾಲುವೆಗಳಲ್ಲಿ ನೀರು ನಿಂತಿದೆ. ಚರಂಡಿ ಮೇಲಿನ ಬಂಡಿ, ಅಂಗಡಿಗಳ ತೆರವು ಅನಿವಾರ್ಯ’ ಎನ್ನುತ್ತಾರೆ ಪೌರಾಯುಕ್ತರು.
‘ಶನಿವಾರ ರಾತ್ರಿ 1.30ರ ತನಕ ಚರಂಡಿ ಸ್ವಚ್ಛತೆಯ ಕಾರ್ಯ ನಡೆಸಿ ದ್ದೇವೆ. ಭಾನುವಾರ ಬೆಳಿಗ್ಗೆ 4.30ರಿಂದ ಮತ್ತೆ ಮುಂದುವರಿಸಿದ್ದೇವೆ. ಆದರೆ, ಚರಂಡಿ ಹಾಗೂ ರಾಜಕಾಲುವೆ ಒತ್ತು ವರಿಯನ್ನು ಪೂರ್ಣವಾಗಿ ತೆರವುಗೊಳಿ ಸದೇ ಸಮಸ್ಯೆಯನ್ನು ಶಾಶ್ವತ ಬಗೆಹರಿ ಸುವುದು ಕಷ್ಟ’ ಎನ್ನುತ್ತಾರೆ ಅವರು.
‘ಬಸ್ ನಿಲ್ದಾಣದ ಆಸುಪಾಸಿನಲ್ಲೇ ಚರಂಡಿ ಮೇಲೆ ನಿರ್ಮಾಣಗಳಿವೆ. ಇಲ್ಲಿನ ಗೂಗಿಕಟ್ಟಿ ಮಳಿಗೆ ಬಳಿ ನೀರು ಬಂದ ಬಗ್ಗೆ ದೂರುಗಳಿವೆ. ಆದರೆ, ಈ ಕಟ್ಟಡದ ತೆರವುಗೊಳಿಸಿ, ದುರಸ್ತಿ ಮಾಡಿ ಮರುಹರಾಜು ಹಾಕಬೇಕಾಗಿದೆ’ ಎನ್ನುತ್ತಾರೆ ಪೌರಾಯುಕ್ತರು.
ಜಿಲ್ಲಾ ಗುರುಭವನ ನಿರ್ಮಾಣದ ಸಂದರ್ಭದಲ್ಲಿ ರಾಜಕಾಲುವೆ ಮುಚ್ಚಿ ಹೋಗಿದೆ. ಇದರಿಂದ ಮಳೆ ನೀರು ಕೆಳಗಿನ ಪೊಲೀಸ್ ಕ್ವಾರ್ಟ್ರಸ್ ಬಳಿ ಬಂದು ಪಿ.ಬಿ. ರಸ್ತೆಯಲ್ಲಿ ನಿಲ್ಲುತ್ತದೆ. ಇದಕ್ಕೂ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.
ಹದಗೆಟ್ಟ ರಸ್ತೆ: ಮಳೆಯ ಪರಿಣಾಮ ನಗರದ ಬಹುತೇಕ ರಸ್ತೆಗಳು ಹದ ಗೆಟ್ಟಿವೆ. ಒಳಚರಂಡಿ ಹಾಗೂ 24x7 ಕುಡಿಯುವ ನೀರಿನ ಕಾಮಗಾರಿಗಳ ಪರಿಣಾಮ ಸಂಚಾರವೇ ಅಸ್ತವ್ಯಸ್ತಗೊಂಡಿದೆ. ‘ಕಾಮಗಾರಿ ನಡೆಸಿದ ರಸ್ತೆಯನ್ನು ಅವರೇ ದುರಸ್ತಿ ಮಾಡಬೇಕು. ಉಳಿದಂತೆ ಮಳೆ ಮುಗಿದ ತಕ್ಷಣವೇ ರಸ್ತೆ ದುರಸ್ತಿ ಕಾರ್ಯ ಆರಂಭ ಗೊಳ್ಳಲಿದೆ’ ಎನ್ನುತ್ತಾರೆ ನಗರಸಭೆ ಸದಸ್ಯರು.
‘ಮುಲ್ಲಾನ್ ಕೆರೆ, ದುಂಡಿ ಬಸವೇಶ್ವರ ಕೆರೆಗಳ ಅಭಿವೃದ್ಧಿಗೆ ಅನು ದಾನ ಮಂಜೂರಾಗಿದೆ. ಈ ಕಾಮಗಾರಿ ಗಳೂ ಶೀಘ್ರವೇ ಆರಂಭಗೊಳ್ಳಲಿವೆ’ ಎನ್ನುತ್ತಾರೆ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ.
* *
ಚರಂಡಿ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ನಗರೋ ತ್ಥಾನ–3ನೇ ಹಂತದಲ್ಲಿ ₹ 27 ಕೋಟಿ ಮಂಜೂರಾಗಿದೆ. ಈ ಕಾಮಗಾರಿ ಪೂರ್ಣಗೊಂಡರೆ ಸುಧಾರಿಸಬಹುದು
ಗಣೇಶ ಬಿಷ್ಟಣ್ಣನವರ
ಸದಸ್ಯರು, ನಗರಸಭೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.