ಕೆ.ಆರ್.ನಗರ: ತಾಲ್ಲೂಕಿನ ಚುಂಚನಕಟ್ಟೆ ಕ್ಷೇತ್ರ ದೊಡ್ಡಮಟ್ಟದ ಪ್ರವಾಸಿ ತಾಣವಾಗಬೇಕು ಎಂದು ಚಿತ್ರನಟ ಯಶ್ ಹೇಳಿದರು. ತಾಲ್ಲೂಕಿನ ಚುಂಚನಕಟ್ಟೆ ಶ್ರೀರಾಮ ದೇವಸ್ಥಾನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಜಲಪಾತೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಈ ಭಾಗದಲ್ಲಿ ಚಿತ್ರೀಕರಣ ಮಾಡಿರುವುದು ಸದಾ ನೆನಪಿಗೆ ಬರುತ್ತದೆ. ನಮ್ಮ ಊರು, ನಮ್ಮ ಸಂಸ್ಕೃತಿ ಬೆಳೆದು ಜಗತ್ತಿನಲ್ಲಿಯೇ ಪ್ರಸಿದ್ಧಿ ಪಡೆಯಬೇಕು ಎಂದ ಅವರು, ಇದೇ ರೀತಿ ನಿಮ್ಮ ಆಶೀರ್ವಾದ, ಪ್ರೀತಿ ಹೀಗೆ ಇರಲಿ ಎಂದರು ಅಲ್ಲದೇ ಹೆಂಗಿದ್ದೇ... ಹೆಂಗಾದೆ, ಅಣ್ತಮ್ಮ ಹಾಡನ್ನು ಹೇಳಿ ಪ್ರೇಕ್ಷರಿಂದ ಜೋರಾಗಿ ಚಪ್ಪಾಳೆ, ಸಿಳ್ಳೆ ಗಿಟ್ಟಿಸಿಕೊಂಡರು.
ರಾಧಿಕಾ ಪಂಡಿತ್ ಮಾತನಾಡಿ, ಈ ಸ್ಥಳದ ಬಗ್ಗೆ, ಜನತೆಯ ಬಗ್ಗೆ ಯಶ್ ಆಗಾಗ ನನಗೆ ಹೇಳು ತ್ತಲೇ ಇರುತ್ತಿರುತ್ತಾರೆ. ಸಂಜೆ ಬಂದಿರುವುದರಿಂದ ನಾನು ನೋಡಲು ಸಾಧ್ಯವಾಗಿಲ್ಲ. ಚುಂಚನಕಟ್ಟೆಗೆ ಮತ್ತೊಮ್ಮೆ ಬರುತ್ತೇನೆ, ನಿಮ್ಮ ಮನೆಯಲ್ಲಿ ಊಟ ಮಾಡಿ ಹೋಗುತ್ತೇನೆ ಎಂದರು.
ಕಕ್ಕಿರಿದು ತುಂಬಿದ ಜನತೋತ್ಸಮ ಮಧ್ಯ ಸಾಧು ಕೋಕಿಲಾ, ಉಷಾ ಕೋಕಿಲಾ, ಚೈತ್ರಾ, ಇಂದು ನಾಗರಾಜ್, ಶಶಾಂಕ್, ಮನು, ಸಂತೋಷ್, ಪ್ರಕಾಶ್, ಶ್ಯಾಮ್ ಮತ್ತು ತಂಡದವರಿಂದ ಮ್ಯೂಸಿಕಲ್ ನೈಟ್, ಹಾಡು ನೃತ್ಯ ಪ್ರೇಕ್ಷರ ಮನಸೆಳೆದವು. ಅಪರ್ಣಾ ನಿರೂಪಿಸಿದರು.
ಶಾಸಕ ಸಾ.ರಾ.ಮಹೇಶ್, ಸಂಸದ ಸಿ.ಎಸ್.ಪುಟ್ಟರಾಜು, ಮೈಸೂರು ಮೇಯರ್ ರವಿಕುಮಾರ್, ಜಿ.ಪಂ ಸದಸ್ಯರಾದ ಡಿ.ರವಿಶಂಕರ್, ಅಮಿತ್ ವಿ.ದೇವರಹಟ್ಟಿ, ಎಸ್.ಆರ್.ರಾಮೇಗೌಡ, ಉಪವಿಭಾಗಾಧಿಕಾರಿ ಡಾ.ಸೌಜನ್ಯ, ಮುಖಂಡರಾದ ಎ.ಟಿ.ಸೋಮಶೇಖರ್, ಸಿ.ಜೆ.ದ್ವಾರಕೀಶ್ ಇತರರು ಇದ್ದರು.