ಉಡುಪಿ: ಸೌಹಾರ್ದದಿಂದ ನಾಡಿನೆಲ್ಲೆಡೆ ಆಚರಿಸುವ ಏಕೈಕ ಹಬ್ಬ ಓಣಂ ಎಂದು ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಕೇರಳ ಕಲ್ಚರ್ ಅಂಡ್ ಸೋಶಿಯಲ್ ಸೆಂಟರ್ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಓಣಂ ಹಬ್ಬ ಮತ್ತು ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಉಡುಪಿ ಮತ್ತು ದಕ್ಷಿಣ ಕನ್ನಡ ಕೇರಳದ ನೆರೆಯ ಜಿಲ್ಲೆಯಾಗಿದೆ. ಆಚಾರ–ವಿಚಾರ, ಸಾಂಸ್ಕೃತಿಕ ಹಾಗೂ ಭೌಗೋಳಿಕವಾಗಿ ಸಾಕಷ್ಟು ಸಾಮ್ಯತೆ ಇವೆ. ದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಅಕ್ಷರಸ್ಥರನ್ನು ಹಾಗೂ ಶೈಕ್ಷಣಿಕವಾಗಿ ಮುಂದುವರೆದ ರಾಜ್ಯವಾಗಿ ಕೇರಳ ಗುರುತಿಸಿಕೊಂಡಿದೆ’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ಜನರು ಕೃಷಿಯಿಂದ ವಿಮುಕ್ತರಾಗುತ್ತಿದ್ದಾರೆ. ಆದರೆ ಕೇರಳಿಗರು ಇಲ್ಲಿನ ಕೃಷಿ ಭೂಮಿಯನ್ನು ಖರೀದಿಸಿ ಅಪಾರ ಪ್ರಮಾಣದಲ್ಲಿ ಬೇಸಾಯವನ್ನು ಮುಂದುವರೆಸುತ್ತಿದ್ದಾರೆ’ ಎಂದರು.
ಮಾಜಿ ಶಾಸಕ ಕೆ. ರಘುಪತಿ ಭಟ್, ಮಣಿಪಾಲ ಸಿಡಿಕೇಟ್ ಬ್ಯಾಂಕ್ ಪ್ರಬಂಧಕ ಪಿ. ಮಧು, ಕೇರಳ ಸಮಾಜದ ಅಧ್ಯಕ್ಷ ಟಿ.ಕೆ. ರಾಜನ್, ಉಡುಪಿ ಕೇರಳ ಕಲ್ಚರ್ ಅಂಡ್ ಸೋಶಿಯಲ್ ಸೆಂಟರ್ ಸ್ಥಾಪಕ ಡಾ.ಟಿ.ಎನ್. ಶೀಧರ್ ಕುರುಪ್, ಉಪಸ್ಥಿತರಿದ್ದರು.