ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ರಕ್ಷಣೆಗೆ ಏಕೆ ಹಿಂಜರಿಕೆ?

Last Updated 11 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

–ಕವಿತಾ ರತ್ನ

**

ದೇಶದ ರಾಜಧಾನಿ ನವದೆಹಲಿಯಿಂದ ಮತ್ತೆರಡು ಭೀಕರ ಸುದ್ದಿಗಳು. ಎರಡು ಹಸುಳೆಗಳು ತಂತಮ್ಮ ಶಾಲೆಗಳ ಆವರಣಗಳಲ್ಲಿ ಎದುರಿಸಿದ ದುಷ್ಕೃತ್ಯ ಕಾಡುವಂತಹದ್ದು. ತನ್ನೊಡಲಿಗೆ ಬರುವ ಎಲ್ಲಾ ಮಕ್ಕಳನ್ನೂ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನ್ಮಾಕವಾಗಿ ಕಾಪಾಡಬೇಕಿರುವ ಶಾಲೆಗಳಲ್ಲೇ ನಡೆದ ಈ ಘಟನೆಗಳು ಅತ್ಯಂತ ವೇದನೆ ಹಾಗೂ ಕ್ರೋಧ ಹುಟ್ಟಿಸುತ್ತವೆ. ಇವಕ್ಕೆ ನೇರವಾಗಿ ಕಾರಣವಾದವರು ಮಾತ್ರವಲ್ಲ, ಪರೋಕ್ಷವಾಗಿ ಕಾರಣವಾದವರೂ ತಪ್ಪಿತಸ್ಥರು. ಈ ಮಕ್ಕಳಿಗೆ ಮತ್ತು ಅವರ ಕುಟುಂಬಗಳಿಗೆ ಎಂದಾದರೂ ಒಂದು ದಿನ ನ್ಯಾಯ ಸಿಗಬಹುದಾದರೂ, ಅವರಿಗೆ ಆಗಿರುವ ಆಘಾತ ಸರಿಪಡಿಸಲಾಗದ್ದು.

ನಿಜವಾಗಿಯೂ ಖೇದದ ಸಂಗತಿಯೆಂದರೆ ಈ ಎರಡೂ ಘಟನೆಗಳು ದೇಶದಲ್ಲಿ ಅನೇಕ ಕಡೆಗಳಲ್ಲಿ ನಡೆದಿರುವ, ನಡೆಯು ತ್ತಲೇ ಇರುವ ಘಟನೆಗಳ ಪ್ರತಿರೂಪ. ದಿನೇ ದಿನೇ ಇಂಥ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಕ್ಕಳ ವಯೋಮಿತಿ ಕಡಿಮೆ ಆಗುತ್ತಿದೆ. ಏಕೆಂದರೆ ಅವರಿಗೆ ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ ಸಾಮರ್ಥ್ಯ ಕಡಿಮೆ ಇರುತ್ತದೆ. ಶಾಲೆಗಳ ಹೊರಗೆ ನಡೆಯುತ್ತಿರುವ ದಬ್ಬಾಳಿಕೆ, ಕ್ರೌರ್ಯ ಮತ್ತು ನೀಚತನಗಳು ಶಾಲೆಗಳ ಒಳಗೂ ನುಸುಳಿರುವುದು ತಲ್ಲಣ ಉಂಟುಮಾಡಿದೆ.

ಶಾಲೆಗಳಲ್ಲಿ ಮಕ್ಕಳ ರಕ್ಷಣೆಗೆ ನೀತಿ ಬೇಕು, ಮಾರ್ಗಸೂಚಿಗಳು ಬೇಕು ಎನ್ನುವ ಕರೆ ದೆಹಲಿಯ ಮಖ್ಯಮಂತ್ರಿಯಿಂದ ಆದಿಯಾಗಿ ಎಲ್ಲರಿಂದಲೂ ಕೇಳಿ ಬರುತ್ತಿವೆ. ರಾಜ್ಯದ ಗೃಹಸಚಿವರು ಶಾಲೆಗಳಲ್ಲಿನ ಸುರಕ್ಷತೆಯ ಬಗ್ಗೆ ನಿಗಾವಹಿಸಲು ಪೊಲೀಸರಿಗೂ ಸೂಚನೆ ನೀಡಿದ್ದಾರೆ.

2014ರಲ್ಲಿ ಕರ್ನಾಟಕದ ವಿವಿಧ ಶಾಲೆಗಳಲ್ಲಿ ಸರಣಿಯೋಪಾದಿ ಮಕ್ಕಳ ಮೇಲೆ ಅತ್ಯಾಚಾರಗಳು ನಡೆದಾಗ ಕರ್ನಾಟಕ ಒಂದು ಪ್ರಮುಖ ತೀರ್ಮಾನ ತೆಗೆದುಕೊಂಡಿತ್ತು. ರಾಜ್ಯಕ್ಕೊಂದು ಮಕ್ಕಳ ರಕ್ಷಣಾ ನೀತಿ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಮಕ್ಕಳ ರಕ್ಷಣೆಯ ಮಾರ್ಗಸೂಚಿಯ ಅಗತ್ಯತೆಯನ್ನು ಮನಗಂಡು ಅವುಗಳನ್ನು ರೂಪಿಸಲು ಸಮಿತಿಯೊಂದನ್ನು ರಚಿಸಿತ್ತು. ನಾನು ಕೂಡ ಆ ಸಮಿತಿಯ ಒಬ್ಬ ಸದಸ್ಯೆ.

ಶಾಲೆಗಳಲ್ಲಿ ನಡೆಯುವ ದೌರ್ಜನ್ಯಗಳು ಕೇವಲ ಲೈಂಗಿಕ ಸ್ವರೂಪದವುಗಳಲ್ಲ. ಅವು ದೈಹಿಕ ಹಾಗೂ ಮಾನಸಿಕವೂ ಇರಬಹುದು. ಈ ದೌರ್ಜನ್ಯಗಳನ್ನು ಗುರುತಿಸುವುದಷ್ಟೇ ಅಲ್ಲ, ಅವುಗಳನ್ನು ತಡೆಗಟ್ಟುವುದು ಸಹ ಅಷ್ಟೇ ಮುಖ್ಯವೆಂದು ಪರಿಗಣಿಸಿ ಸಮಿತಿ ಮುನ್ನಡೆಯಿತು. ಗ್ರಾಮೀಣ ಹಾಗೂ ನಗರಗಳ ವಿವಿಧ ವಯಸ್ಸಿನ, ಹಿನ್ನೆಲೆಗಳ, ಸಾಮರ್ಥ್ಯಗಳ ಸುಮಾರು ಒಂದು ಸಾವಿರ ಗಂಡು ಮತ್ತು ಹೆಣ್ಣು ಮಕ್ಕಳ ಅಭಿಪ್ರಾಯ, ಸಲಹೆಗಳನ್ನು ಪಡೆಯಲಾಯಿತು. ವಿವಿಧ ಮಂತ್ರಿಗಳು, ಇಲಾಖೆಗಳ ಪ್ರತಿನಿಧಿಗಳು, ಶಾಲಾ ಶಿಕ್ಷಕರು, ಶಾಲಾ ನಿರ್ವಾಹಕರು, ಪೋಷಕರು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಯಿತು. ಅನ್ವಯವಾಗುವ ಕಾನೂನುಗಳನ್ನು ಅಭ್ಯಸಿಸಿ ದೇಶ ಮತ್ತು ವಿದೇಶಗಳಲ್ಲಿ ಜಾರಿಯಲ್ಲಿರುವ ಒಳ್ಳೆಯ ಮಾದರಿಗಳನ್ನು ಗಮನಿಸಲಾಯಿತು. ಈ ಎಲ್ಲಾ ಕಲಿಕೆಗಳ ಸಾರವಾಗಿ ಮೊದಲ ಕರಡು ಪ್ರತಿ ಸಿದ್ಧವಾಯಿತು. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಈ ಕರಡು ಚರ್ಚಿತವಾಗಿ ಬಂದ ಸಲಹೆಗಳನ್ನು ಒಳಗೊಂಡಂತೆ ‘ಕರ್ನಾಟಕ ರಾಜ್ಯ ಮಕ್ಕಳ ಸುರಕ್ಷತಾ ನೀತಿ –2016’ ಸಿದ್ಧವಾಯಿತು.

2016ರ ಏಪ್ರಿಲ್‌ 20ರಂದು ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಈ ನೀತಿಗೆ ಅನುಮೋದನೆ ಸಿಕ್ಕಿದೆ. ಇಂತಹ ನೀತಿ, ‘ದೇಶದಲ್ಲೇ ಪ್ರಥಮ’ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸಂಸ್ಥೆಗಳನ್ನೊಳಗೊಂಡಂತೆ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ 18 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಇವು ಅನ್ವಯವಾಗುತ್ತವೆ.

ಇವುಗಳಲ್ಲಿ ಮಕ್ಕಳ ರಕ್ಷಣೆಯನ್ನು ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಮೂಡಿ ಬಂದಿರುವ ಮಕ್ಕಳ ಉತ್ಕೃಷ್ಟ ಹಿತಾಸಕ್ತಿಯ ವ್ಯಾಪ್ತಿಯಲ್ಲಿ ಪರಿಗಣಿಸಿ ಅವರ ರಕ್ಷಣೆಗೆ ಅಗತ್ಯವಿರುವ ವ್ಯವಸ್ಥೆಗಳೊಂದಿಗೆ ಅವರ ಭಾಗವಹಿಸುವಿಕೆಗೆ ಆದ್ಯತೆ ನೀಡಲಾಗಿದೆ. ಮಕ್ಕಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಅವರ ಸಾಮರ್ಥ್ಯ ಅವರ ವಯಸ್ಸಿಗೆ ಸೂಕ್ತವಾದ ಮಟ್ಟದಲ್ಲಿ ಅವರ ಸಶಕ್ತತೆಗೆ ಒತ್ತು ಕೊಟ್ಟು ಹಿರಿಯರಿಂದ ಹಾಗೂ ಇತರ ಮಕ್ಕಳಿಂದ ಅವರಿಗೆ ತೊಂದರೆ ಉಂಟಾದಾಗ ಅವರು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಅವರಿಗೆ ಸರಳವಾಗಿ ತಿಳಿಸಿ ಹೇಳುವ ವಿಧಾನಗಳನ್ನು ಮಾರ್ಗಸೂಚಿಯಲ್ಲಿ ಸೇರಿಸಲಾಗಿದೆ.

ಶಿಕ್ಷಕರು ಮಕ್ಕಳ ನಡವಳಿಕೆಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಮತ್ತು ಪ್ರತಿಕ್ರಿಯಿಸಬೇಕು; ಮಕ್ಕಳ ಸುರಕ್ಷತೆಗೆ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು; ಸುರಕ್ಷತೆಯ ಉಲ್ಲಂಘನೆ ಅಥವಾ ದೌರ್ಜನ್ಯ ಜರುಗಿದಲ್ಲಿ ಅವಕ್ಕೆ ಹೇಗೆ ಸಂವೇದನಾಶೀಲವಾಗಿ, ಕಾನುನೂಬದ್ಧವಾಗಿ ಪ್ರತಿಕ್ರಿಯೆ ನೀಡಬೇಕು; ಯಾವ ರೀತಿಯ ರೆಫರಲ್, ಮೇಲ್ವಿಚಾರಣೆ ಮತ್ತು ಆಂತರಿಕ ವಿಮರ್ಶೆಯ ವಿಧಾನಗಳನ್ನು ಅಳವಡಿಸಬೇಕು ಮತ್ತು ಈ ವಿಷಯದಲ್ಲಿ ನೇರ ಜವಾಬ್ದಾರಿಗೆ ಒಳಪಡುವ 12 ಇಲಾಖೆಗಳ ಜವಾಬ್ದಾರಿಯನ್ನು ಸ್ಥಳೀಯ ಮಟ್ಟದಿಂದ ರಾಜ್ಯಮಟ್ಟದವರೆಗೆ ಹೇಗೆ ನಿಗದಿಪಡಿಸುವುದು- ಈ ಎಲ್ಲಾ ಮಾಹಿತಿಗಳು ಸೇರ್ಪಡೆಯಾಗಿವೆ. ಜೊತೆಗೆ ಪ್ರತಿಯೊಂದು ಶಾಲೆಗೂ ತನ್ನದೇ ಆದ ಪರಿಸ್ಥಿತಿ ಹಾಗೂ ಅಗತ್ಯಗಳಿಗೆ ತಾಳೆ ಆಗುವಂತಹ ಶಾಲಾ ಮಕ್ಕಳ ರಕ್ಷಣಾ ನೀತಿಯನ್ನು ತಯಾರಿಸಿಕೊಳ್ಳಲು ಮಾರ್ಗದರ್ಶನ ಕೂಡ ನೀಡಲಾಗಿದೆ. ತಾತ್ಕಾಲಿಕ ಹಾಗೂ ತುರ್ತಾಗಿ ಒಂದು ಶಾಲೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸುವುದರೊಂದಿಗೆ, ಮಕ್ಕಳ ರಕ್ಷಣೆಗೆ ಶಾಲೆ ತೆಗೆದುಕೊಳ್ಳಬೇಕಾದ ದೀರ್ಘಕಾಲಿಕ ಸಾಂಸ್ಥಿಕ ಕ್ರಮಗಳನ್ನು ಸಹ ಸೇರಿಸಲಾಗಿದೆ.

ಯಾವುದೇ ಸಂದರ್ಭದಲ್ಲಿ ಒಂದು ಶಾಲೆ ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ದೂರು ಕೊಡಲು ಬಳಸಬಹುದಾದ ವ್ಯವಸ್ಥೆಗಳು ಹಾಗೂ ಸರ್ಕಾರ ತೆಗೆದುಕೊಳ್ಳಬೇಕಾದ ಇಲಾಖೆ ಮಟ್ಟದ ಹಾಗೂ ಇಲಾಖೇತರ ಕ್ರಮಗಳ ವಿವರಣೆ ಅಡಕವಾಗಿದೆ. ಹಳ್ಳಿ ಮಟ್ಟದಿಂದ ಹಿಡಿದು ರಾಜ್ಯಮಟ್ಟದವರೆಗೆ ಹಂತಹಂತವಾಗಿ ಇವುಗಳನ್ನು ವಿವರಿಸಲಾಗಿದೆ.

ಈ ನೀತಿ ಹಾಗೂ ಮಾರ್ಗಸೂಚಿಗಳು ಶಾಲೆಗಳಲ್ಲಿ ಪಾಲನೆ ಆಗಬೇಕು ಎಂದು ಸೂಚಿಸಿರುವ ಸರ್ಕಾರ, ಮುಂದಿನ ಹೆಜ್ಜೆಗಳನ್ನು ತೆಗೆದುಕೊಳ್ಳಲು ಉತ್ಸಾಹ ತೋರುತ್ತಿಲ್ಲ. ಇವುಗಳನ್ನು ಅರ್ಥಪೂರ್ಣವಾಗಿ ಜಾರಿಗೆ ತರಲು ಶಾಲಾ ಮಟ್ಟದಲ್ಲಿ ಆಗಬೇಕಿರುವ ಸಾಮರ್ಥ್ಯಾಭಿವೃದ್ಧಿಯ ಮೊದಲ ಹೆಜ್ಜೆಯನ್ನು ಇನ್ನೂ ಇಟ್ಟಿಲ್ಲ. ಮಕ್ಕಳ ರಕ್ಷಣೆಗೆ ಸರ್ಕಾರ ನೀಡಿರುವ ಆದ್ಯತೆ ಈಗ ಕಾಗದದ ಮೇಲಷ್ಟೇ ಉಳಿಯುತ್ತದೆಯೇ ಎಂಬ ಆತಂಕ ನಮ್ಮೆಲ್ಲರನ್ನು ಕಾಡುತ್ತಿದೆ.

ಮಕ್ಕಳ ರಕ್ಷಣೆಗೆ ದೇಶದಲ್ಲೇ ಮಾದರಿಯಾಗಬಹುದಾಗಿದ್ದ ನಮ್ಮ ರಾಜ್ಯ ಏಕೆ ಮುಂದಿನ ಹೆಜ್ಜೆಗಳನ್ನಿಡಲು ಹಿಂಜರಿಯುತ್ತಿದೆ? ‘ಮಕ್ಕಳ ರಕ್ಷಣೆ ಮತ್ತು ಮಕ್ಕಳ ಹಕ್ಕುಗಳಿಗೆ ಆದ್ಯತೆ ನೀಡುತ್ತೇವೆ’ ಎಂದು ಎಲ್ಲಾ ವೇದಿಕೆಗಳಲ್ಲಿ ಹೇಳುವ ಸರ್ಕಾರದ ಬದ್ಧತೆ ನಿಜವಾಗಿದ್ದಲ್ಲಿ ಮಕ್ಕಳ ರಕ್ಷಣಾ ನೀತಿ ಮತ್ತು ಮಕ್ಕಳ ರಕ್ಷಣೆಗಾಗಿರುವ ಶಿಕ್ಷಣ ಸಂಸ್ಥೆಗಳ ಮಾರ್ಗಸೂಚಿಗಳು ಪರಿಣಾಮಕಾರಿಯಾಗಿ ಕಾರ್ಯಗತಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT