ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿಯಲ್ಲಿ ಹೂವಿನ ಮಾರುಕಟ್ಟೆ

Last Updated 13 ಸೆಪ್ಟೆಂಬರ್ 2017, 5:22 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯ ಸಗಟು ಹೂವಿನ ವ್ಯಾಪಾರಿಗಳಿಗಾಗಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಹೊಸ ಹೂವಿನ ಮಾರುಕಟ್ಟೆ ಅಭಿವೃದ್ಧಿಯಾಗು ತ್ತಿದೆ. ಎ.ಪಿ.ಎಂ.ಸಿ ಆವರಣದಲ್ಲಿರುವ ಧಾನ್ಯ ಶುದ್ಧೀಕರಣ ಘಟಕದ ಸಮೀಪ ₹ 65 ಲಕ್ಷ ವೆಚ್ಛದಲ್ಲಿ ಕಟ್ಟಡ ನಿರ್ಮಾಣ ಆಗುತ್ತಿದ್ದು, ದೀಪಾವಳಿ ವೇಳೆಗೆ ಇಲ್ಲಿಂದ ಹೂವಿನ ಮಾರಾಟ ಪ್ರಾರಂಭವಾಗುವ ನಿರೀಕ್ಷೆ ಇದೆ.

ಸದ್ಯ ನಗರದಲ್ಲಿರುವ 20ಕ್ಕೂ ಹೆಚ್ಚು ಸಗಟು ಹೂವಿನ ವ್ಯಾಪಾರಿಗಳು  ಹಳೆಯ ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡಿರುವ ಜನತಾ ಬಜಾರ್‌ನ ಹಿಂಬದಿ ಪ್ರದೇಶದಲ್ಲಿ ಹೂವು ಮಾರಾಟ ಮಾಡುತ್ತಾರೆ. ಗದುಗಿನ ಮಾರುಕಟ್ಟೆಗೆ ಪ್ರಮುಖವಾಗಿ ಹೂವಿನ ಹಡಗಲಿಯಿಂದ ಸೂಜಿ ಮಲ್ಲಿಗೆ ಆವಕವಾಗುತ್ತದೆ. ಕೊಪ್ಪಳ, ಲಕ್ಕುಂಡಿ, ಪಾಪನಾಶಿನಿ, ಕದಾಂಪುರ, ಬೆಳಧಡಿ, ನಾಗಾವಿ, ಗಜೇಂದ್ರಗಡ  ಸೇರಿ ಸ್ಥಳೀಯ ವಾಗಿ ಸೇವಂತಿಗೆ, ಕಾಕಡ, ಗಲಾಟೆ, ಮತ್ತು ‘ಅಬಾಲಿ’ ಹೆಸರಿನ ಕನಕಾಂಬರ ಪೂರೈಕೆಯಾಗುತ್ತದೆ. ಗದಗ ಮಾರುಕಟ್ಟೆ ಯಿಂದ ಮಂಗಳೂರು, ಗೋವಾಕ್ಕೆ ಹಡಗಲಿ ಮಲ್ಲಿಗೆ, ಸೇವಂತಿಗೆ ಮತ್ತು ಬೀದರ್‌ಗೆ ಕಾಕಡ ಹೂವು ರಫ್ತಾಗುತ್ತದೆ.

ಸಿಂಗಟಾಲೂರು ಏತ ನೀರಾವರಿ ಯೋಜನೆ ಪ್ರಾರಂಭವಾದ ನಂತರ, ಕಾಲುವೆ ಮೂಲಕ ತುಂಗಭದ್ರಾ ನೀರು ಲಭಿಸುತ್ತಿರುವುದರಿಂದ ಮುಂಡರಗಿ, ರೋಣ, ಗದಗ ತಾಲ್ಲೂಕುಗಳಲ್ಲಿ ಹೆಚ್ಚಿನ ರೈತರು ಪುಷ್ಪ ಕೃಷಿಯತ್ತ ಆಸಕ್ತಿ ತೋ ರಿಸಿದ್ದಾರೆ. ಹೀಗಾಗಿ, ಹಬ್ಬಗಳ ಸಂದರ್ಭ ದಲ್ಲಿ ಚೆಂಡು ಹೂವು, ಕೆಂಪು, ಬಿಳಿ ಸೇವಂತಿಗೆ ಸೇರಿ ಸಾಕಷ್ಟು ಪ್ರಮಾಣದಲ್ಲಿ ಹೂವು ಮಾರುಕಟ್ಟೆಗೆ ಬರುತ್ತಿದೆ.

ಸಗಟು ವ್ಯಾಪಾರಿಗಳಿಂದ  ಹೂವು ಖರೀದಿಸಿ ಚಿಲ್ಲರೆ ವ್ಯಾಪಾರಿಗಳು ಮಾಳ ಶೆಟ್ಟಿ ವೃತ್ತ, ಹುಯಿಲಗೋಳ ನಾರಾಯಣ ರಾವ್‌ ವೃತ್ತ, ತೋಂಟದಾರ್ಯ ಮಠ, ಬೆಟಗೇರಿ ತರಕಾರಿ ಮಾರುಕಟ್ಟೆ ಸೇರಿ ನಗರದ ಹಲವೆಡೆ ಮಾರಾಟ ಮಾಡುತ್ತಾರೆ.

‘ಹೂವಿನ ಮಾರುಕಟ್ಟೆಯಲ್ಲಿ ಮೊದಲ ಹಂತದಲ್ಲಿ 18 ಮಳಿಗೆಗಳನ್ನು ನಿರ್ಮಿಸಲಾಗುತ್ತಿದ್ದು, ಸಗಟು ವ್ಯಾಪಾರಿ ಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಇಲ್ಲಿಂದಲೇ ಹೂವಿನ ಹರಾಜು ನಡೆಯ ಲಿದೆ. ಇದರ ಯಶಸ್ಸು ನೋಡಿಕೊಂಡು ಹಂತಹಂತವಾಗಿ ಮಳಿಗೆಗಳ ಸಂಖ್ಯೆ ಹೆಚ್ಚಿಸುವ ಯೋಜನೆ ಇದೆ’ ಎಂದು ಎ.ಪಿ.ಎಂ.ಸಿ ಕಾರ್ಯದರ್ಶಿ ಎಂ. ಮಂಜು ನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶ್ರಾವಣದಿಂದ ದೀಪಾವಳಿವರೆಗೆ ಹೂವಿನ ಸೀಸನ್‌ ಇರುತ್ತದೆ. ಅದರಲ್ಲೂ ಈ ಅವಧಿಯಲ್ಲಿ  ರಾಷ್ಟ್ರೀಯ ಮಾನ್ಯತೆ ಇರುವ ಹಡಗಲಿ ಮಲ್ಲಿಗೆಗೆ ಭಾರಿ ಬೇಡಿಕೆ ಇರುತ್ತದೆ. ಇಲ್ಲಿಂದ ಗೋವಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇವಂತಿಗೆ ರವಾನೆ ಆಗುತ್ತದೆ. ಎ.ಪಿ.ಎಂ.ಸಿ ಆವ ರಣದಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಿ ರುವುದು ಮಾರುಕಟ್ಟೆ ವಿಸ್ತರಣೆ ದೃಷ್ಟಿ ಯಿಂದ ಮಹತ್ವದ್ದು’ಎಂದು ಸಗಟು ಹೂವಿನ ವ್ಯಾಪಾರಿ ಅನ್ವರ್‌ಸಾಬ್‌ ಶಿರ ಹಟ್ಟಿ ಅಭಿಪ್ರಾಯಪಟ್ಟರು.

‘ಎ.ಪಿ.ಎಂ.ಸಿ ಆವರಣದಲ್ಲಿ ಮಾರು ಕಟ್ಟೆ ಪ್ರಾರಂಭಗೊಂಡರೆ ಚಿಲ್ಲರೆ ವ್ಯಾಪಾ ರಿಗಳಿಗೆ ಒಂದೇ ಸೂರಿನಡಿ ಸ್ಪರ್ಧಾತ್ಮಕ ದರದಲ್ಲಿ ಹೂವು ಲಭಿಸುತ್ತದೆ ಜತೆಗೆ ಗದಗ ಮಾರುಕಟ್ಟೆಗೆ ಆವಕವಾಗುವ ಮತ್ತು ಇಲ್ಲಿಂದ ಬೇರೆಡೆಗೆ ರಫ್ತಾಗುವ ಹೂವಿನ ಪ್ರಮಾಣ  ಹೆಚ್ಚುತ್ತದೆ’ ಎಂದು  ಹೂವಿನ ವ್ಯಾಪಾರಿ ಉಮರ್‌ ಫಾರೂಕ್‌ ಹುಬ್ಬಳ್ಳಿ ಅಭಿಪ್ರಾಯಪಟ್ಟರು.

ಶ್ರಾವಣದ ನಂತರ ಹೂವಿನ ಬೆಲೆ ಗಗನಮುಖಿಯಾಗಿದೆ. ಎರಡು ದಿನಗಳ ಹಿಂದಿನವರೆಗೆ ಕೆ.ಜಿಗೆ ಸರಾಸರಿ ₹ 350 ರಿಂದ ₹ 400ರರವರೆಗೆ ಮಾರಾಟವಾ ಗುತ್ತಿದ್ದ ಕನಕಾಂಬರ ಮಂಗಳವಾರ ₹ 500ರಿಂದ ₹ 600ರ ತನಕ ಮಾರಾಟ ಆಯಿತು. ಹಬ್ಬಗಳ ಸಾಲು ಇದ್ದು, ಬೆಲೆ ಏರಿದೆ ಎನ್ನುತ್ತಾರೆ  ಫಾರೂಕ್‌.

* * 

ಹೂವಿನ ಮಾರುಕಟ್ಟೆ ಕಾಮಗಾರಿ ನಡೆಯುತ್ತಿದ್ದು, ದೀಪಾವಳಿ ವೇಳೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಆರಂಭದಲ್ಲಿ ಸಗಟು ವ್ಯಾಪಾರಿಗಳಿಗೆ 18 ಮಳಿಗೆ ಇರಲಿವೆ
ಎಸ್‌.ಎಚ್‌. ಚಂದ್ರಶೇಖರಪ್ಪ
ಎಪಿಎಂಸಿ ಎ.ಇ.ಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT