ರೋಣ: ರೈತರನ್ನು ತುರ್ತು ಸಮಯದಲ್ಲಿ ಕೈ ಹಿಡಿಯುವ ಹೈನುಗಾರಿಕೆ ಬರಗಾಲ ದಿಂದ ತತ್ತರಿಸಿ ಹೋಗಿದೆ. ಮೇವಿನ ಕೊರತೆಯಿಂದ ರೈತರು ಜಾನುವಾರು ಗಳನ್ನು ಅನಿವಾರ್ಯವಾಗಿ ಕಸಾಯಿ ಖಾನೆಗಳಿಗೆ ಮಾರಬೇಕಿದೆ.
ಹಸುಗಳಿಗೆ ಹಸಿ ಮೇವು ಅಗತ್ಯ: ಹಸು ಗಳು ಹಸಿ ಮೇವು ತಿನ್ನುವುದರಿಂದ ಹಾಲಿನ ಪ್ರಮಾಣ ಹೆಚ್ಚುತ್ತದೆ. ಆದರೆ, ಬರದ ನಡುವೆ ಹಸಿ ಮೇವು ಸಿಗದ ಕಾರಣ ಹಸುಗಳು ಹಾಲು ನೀಡುವ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಹೈನುಗಾರಿಕೆ ನಷ್ಟದತ್ತ ಸಾಗಿದೆ.
ಸಾಲ ಬಾಧೆಗೆ ಸಿಲುಕಿರುವ ರೈತರು ಜಾನುವಾರುಗಳನ್ನು ಅಗ್ಗದ ದರದಲ್ಲಿ ಕಸಾಯಿಖಾನೆಗೆ ಕಳುಹಿಸುವುದು ಅನಿವಾರ್ಯವಾಗಿದೆ.ಮುಂಬಯಿ ಮೂಲದ ಖರೀದಿದಾರರು ತಾಲ್ಲೂಕಿನಲ್ಲಿ ಸಂಚರಿಸಿ ಜಾನುವಾರುಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ತಾಲ್ಲೂಕಿನಲ್ಲಿ ಶೇ 10ರಷ್ಟು ಜಾನುವಾರುಗಳ ಸಂಖ್ಯೆ ಕಡಿಮೆ ಆಗಿದೆ. ಇದರಿಂದಾಗಿ ಮೂರು ವರ್ಷದ ಅವಧಿಯಲ್ಲಿ ತಾಲ್ಲೂಕಿನ ಐದು ಕಡೆ ಹಾಲು ಉತ್ಪಾದಕ ಸಂಘಗಳು ಸ್ಥಗಿತ ಗೊಂಡಿವೆ.
ಹಾಲಿನ ಉತ್ಪಾದನೆ ಕಡಿಮೆ: ತಾಲೂಕಿ ನಿಂದ ಪ್ರತಿ ನಿತ್ಯ ಅಂದಾಜು 13,480 ಲೀಟರ್ ಹಾಲನ್ನು ಧಾರವಾಡದ ಕೆ.ಎಂ.ಎಫ್.ಗೆ ಸರಬರಾಜು ಮಾಡಲಾ ಗುತ್ತಿತ್ತು. ಹಸುಗಳ ಸಂಖ್ಯೆ ಕುಸಿತವಾಗಿ ರುವುದರಿಂದ ಮೂರು ತಿಂಗಳಿನಿಂದ ಹಾಲಿನ ಉತ್ಪಾದನೆಯೂ ಶೇ 10ರಷ್ಟು ಕುಸಿದಿದೆ ಎಂದು ಪಶು ಸಂಗೋಪನಾ ಇಲಾಖೆಯ ಮೂಲಗಳು ತಿಳಿಸಿವೆ.