ಗುಳೇದಗುಡ್ಡ: ಇಲ್ಲಿನ ಕೋಟೆಕಲ್ಲ ಗ್ರಾಮದಲ್ಲಿ ಗುಳೇದಗುಡ್ಡ–ಬಾದಾಮಿ ಪ್ರಮುಖ ರಸ್ತೆ ಮೇಲೆ ಗಟಾರದ ಕೊಳಚೆ ನೀರು ಹರಿಯುತ್ತಿದ್ದು. ಇದರಿಂದಾಗಿ ರಸ್ತೆಯಲ್ಲಿ ತಗ್ಗು ಗುಂಡಿಗಳು ಸಂಪೂರ್ಣ ಹದಗೆಟ್ಟು ಹೋಗಿದೆ.
ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ರಸ್ತೆ ಬದಿ ಗಟಾರ ನಿರ್ಮಿಸಲಾಗಿದೆ. ಆದರೆ, ಈ ಚರಂಡಿ ತುಂಬಿ ನೀರೆಲ್ಲ ರಸ್ತೆ ಮೇಲೆ ಹರಿಯುತ್ತಿರುವುದರಿಂದ ದುರ್ವಾಸನೆ ಹರಡಿದೆ. ಅಕ್ಕಪಕ್ಕದ ಜನರಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ರಸ್ತೆಯಲ್ಲಿ ಗುಂಡಿ ಬಿದ್ದಿರುವುದರಿಂದ ಬೈಕ್ ಸವಾರರು ಹಲವು ಬಾರಿ ಬಿದ್ದಿದ್ದಾರೆ. ರಸ್ತೆ ದುರಸ್ತಿಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮದ ನಿವೃತ್ತ ಶಿಕ್ಷಕ ಎಚ್.ಎಲ್. ಕುರಹಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿ ತಗ್ಗುಗುಂಡಿಗಳು ಬಿದ್ದು ರಸ್ತೆ ಹದಗೆಟ್ಟು ಸುಮಾರು ಎರಡು ವರ್ಷ ಗತಿಸಿದರೂ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ತಕ್ಷಣ ರಸ್ತೆ ದುರಸ್ತಿಗೊಳಿಸ ಬೇಕು ಎಂದು ಮಹಾಲಿಂಗಪ್ಪ ನಾಡ ಗೌಡರ, ಜಗದೀಶ ಹಾದಿಮನಿ ಒತ್ತಾಯಿಸಿದ್ದಾರೆ.