ಕೂಡಲಸಂಗಮ: ಕೂಡಲ ಸಂಗಮದ ಚರಿತ್ರೆ ತಿಳಿಸುವ ಶಾಸನದ ಪಕ್ಕದಲ್ಲಿಯೇ ಕೂಡಲಸಂಗಮ ಅಭಿವೃದ್ಧಿ ಮಂಡಳಿಯು ಕಸದ ತೊಟ್ಟಿ ಇಟ್ಟಿರುವುದು ಇತಿಹಾಸ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಗಮೇಶ್ವರ ದೇವಾಲಯದ ಅವರಣದಲ್ಲಿ ಇರುವ ರಾಜಗೋಪುರದ ಪ್ರವೇಶ ದ್ವಾರದ ಎಡಬದಿಯಲ್ಲಿ ಈ ಶಾಸನವಿದೆ. ಆದರೆ, ಪಕ್ಕದಲ್ಲಿಯೇ ಕಸದ ತೊಟ್ಟಿ ಇಟ್ಟಿರುವುದರಿಂದ ಪ್ರವಾಸಿಗರು ಎಸೆಯುವ ಕಸ ಶಾಸನದ ಅಕ್ಕ–ಪಕ್ಕ ಬೀಳುತ್ತಿದೆ.
ಶಾಸನ ವೀಕ್ಷಿಸಲು ಬರುವವರಿಗೆ ದುರ್ವಾಸನೆಯ ಸ್ವಾಗತ ಸಿಗುತ್ತಿದೆ ! ‘ಸೂಕ್ತ ರಕ್ಷಣೆ ಇಲ್ಲದೆ, ತೆರೆದ ಪ್ರದೇಶದಲ್ಲಿ ಈ ಶಾಸನವನ್ನು ಇಟ್ಟಿರುವುದರಿಂದ ಕೆಲವರು ಇದು ದೇವರ ಮೂರ್ತಿ ಎಂದುಕೊಂಡು ನೀರು, ವಿಭೂತಿ, ಕುಂಕುಮ ಹಾಕುತ್ತಿದ್ದಾರೆ. ಇದರಿಂದ ಶಾಸನದಲ್ಲಿನ ಅಕ್ಷರಗಳು ಅಳಸಿಹೋಗುತ್ತಿವೆ.
ಕ್ಷೇತ್ರದ ಇತಿಹಾಸ ಕುರಿತು ಬೆಳಕು ಚೆಲ್ಲುವ ಪ್ರಮುಖ ಶಾಸನ ಇದಾಗಿದ್ದು, ದೇವಾಲಯಕ್ಕೆ ದಾನ ದತ್ತಿ ಕೊಟ್ಟ ಅಂಶ ಇದರಲ್ಲಿದೆ’ ಎಂದು ಇತಿಹಾಸ ಸ್ನಾತಕೋತ್ತರ ವಿದ್ಯಾರ್ಥಿ ರಾಜಶೇಖರ ತುಂಬಗಿ ಹೇಳಿದರು.
‘ಬಾಗಲಕೋಟದ ನವನಗರದ ಕಲಾಭವನದಲ್ಲಿನ ಮುಳುಗಡೆಯ ಶಾಸನಗಳ ವಿಭಾಗದಲ್ಲಿ ಈ ಶಾಸನದ ಕನ್ನಡ ಪ್ರತಿರೂಪ ಇದೆ. ಅಂತಹ ಕನ್ನಡ ಅವತರಣಿಕೆಯನ್ನು ಈ ಮೂಲ ಶಾಸನದ ಬದಿಯಲ್ಲಿ ನಿಲ್ಲಿಸಿ, ಶಾಸನದ ಸಂರಕ್ಷಣೆಗೆ ಪೂರಕ ಸೌಲಭ್ಯ ಕಲ್ಪಿಸ ಬೇಕು. ಈ ಕಾರ್ಯವನ್ನು ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಮಾಡ ಬೇಕು’ ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.
* *
ಶಾಸನದ ಪಕ್ಕದಲ್ಲಿಯೇ ಕಸದ ತೊಟ್ಟಿ ಇಟ್ಟಿರುವುದು ಗಮನಕ್ಕೆ ಬಂದಿಲ್ಲ. ತಕ್ಷಣ ತೊಟ್ಟಿ ತೆರವುಗೊಳಿಸಿ, ಶಾಸನ ಸಂರಕ್ಷಿಸುವ ಕಾರ್ಯ ಮಾಡಲಾಗುವುದು ಆರ್.ಎಸ್.ಹಿರೇಮಠ ತಹಶೀಲ್ದಾರ್,
ಕೂಡಲಸಂಗಮ ಅಭಿವೃದ್ಧಿ ಮಂಡಳಿ