ನವದೆಹಲಿ: ಪೆಟ್ರೋಲ್ ಬೆಲೆ ಮಂಗಳವಾರ 2014ರ ನಂತರದ ಗರಿಷ್ಠ ಮಟ್ಟಕ್ಕೇರಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಮುಂಬೈಯಲ್ಲಿ ₹80, ಚೆನ್ನೈ ಮತ್ತು ಕೋಲ್ಕತ್ತದಲ್ಲಿ ₹73, ಬೆಂಗಳೂರಿನಲ್ಲಿ ₹71.50 ಮತ್ತು ದೆಹಲಿಯಲ್ಲಿ ₹70ಕ್ಕೆ ಏರಿದೆ. ಡೀಸೆಲ್ ದರ ಕೂಡ ಇದೇ ರೀತಿಯಲ್ಲಿ ಹೆಚ್ಚಳವಾಗಿದೆ.
ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಜನರು ಭರಿಸಲಾಗದ ಮಟ್ಟಕ್ಕೆ ಏರಿಕೆ ಆಗಿಲ್ಲ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ತೈಲ ಮಾರುಕಟ್ಟೆ ಸಂಸ್ಥೆಗಳ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿತ್ಯವೂ ಪರಿಷ್ಕರಿಸುವ ನಿರ್ಧಾರವನ್ನು ಜೂನ್ ತಿಂಗಳಲ್ಲಿ ಜಾರಿಗೆ ತರಲಾಗಿತ್ತು. ಅದಾಗಿ ಹದಿನೈದು ದಿನಗಳ ಬಳಿಕ (ಜುಲೈ 1) ತೈಲ ಬೆಲೆಯಲ್ಲಿ ಭಾರಿ ಏರಿಕೆ ಆಗಿತ್ತು. ರಾಜ್ಯಗಳ ನಡುವೆ ಸಣ್ಣ ಪುಟ್ಟ ವ್ಯತ್ಯಾಸವಿದ್ದರೂ ಪೆಟ್ರೋಲ್ ದರ ಲೀಟರ್ಗೆ ₹7ರವರೆಗೆ ಏರಿಕೆ ಆಗಿತ್ತು. ಜೂನ್ 16ರಿಂದದ ದೆಹಲಿಯಲ್ಲಿ ಲೀಟರ್ ಡೀಸೆಲ್ ₹54.49ಕ್ಕೆ ಮಾರಾಟ ಆಗು
ತ್ತಿತ್ತು. ಆದರೆ ಮಂಗಳವಾರ ಡೀಸೆಲ್ ದರ ₹58.72 ಆಗಿತ್ತು.
ತೈಲ ಬೆಲೆಯಲ್ಲಿ ಇತ್ತೀಚೆಗೆ ಆಗಿರುವ ಏರಿಕೆಗೆ ಅಮೆರಿಕವನ್ನು ಅಪ್ಪಳಿಸಿದ ಇರ್ಮಾ ಮತ್ತು ಹಾರ್ವೆ ಚಂಡಮಾರುತಗಳೇ ಕಾರಣ. ಇದ
ರಿಂದಾಗಿ ತೈಲ ಬೆಲೆಯಲ್ಲಿ ಶೇ 20ರಷ್ಟು ಏರಿಕೆಯಾಗಿದೆ ಎಂದು ಪ್ರಧಾನ್ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ತೈಲ ಬೆಲೆ ಇಳಿಕೆಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆ ಆಧಾರದಲ್ಲಿ ಪ್ರತಿ ದಿನವೂ ತೈಲ ಬೆಲೆ ಪರಿಷ್ಕರಣೆ ಅತ್ಯಂತ ಪಾರದರ್ಶಕ ಮತ್ತು ಗ್ರಾಹಕರ ಪರ ಎಂದು ಪ್ರಧಾನ ಬಣ್ಣಿಸಿದ್ದಾರೆ. ದೇಶದ ಎಲ್ಲೆಡೆ ತೈಲ ಬೆಲೆ ಏಕರೂಪದಲ್ಲಿ ಇರಬೇಕಿದ್ದರೆ ಅದನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದೇ ಏಕೈಕ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಬಕಾರಿ ಸುಂಕದ ಹೊರೆ
2014ರಿಂದ ಈವರೆಗೆ ಲೀಟರ್ ಪೆಟ್ರೋಲ್ ಮೇಲೆ ₹11.77 ಮತ್ತು ಡೀಸೆಲ್ ಮೇಲೆ ₹13.47ರಷ್ಟು ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಹೇರಿದೆ. ಇದರಿಂದ ₹99,000 ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದನ್ನು ಕಡಿಮೆಗೊಳಿಸುವುದು ಹಣಕಾಸು ಸಚಿವಾಲಯಕ್ಕೆ ಬಿಟ್ಟ ವಿಚಾರ ಎಂದು ಪ್ರಧಾನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.