ಯಳಂದೂರು: ತಾಲ್ಲೂಕಿನ ಕೃಷ್ಣಯ್ಯನ ಕಟ್ಟೆಯ ಬಳಿ ಇರುವ ಜಮೀನುಗಳಿಗೆ ಬುಧವಾರ ಮುಂಜಾನೆ ಕಾಡಾನೆಗಳು ದಾಳಿ ನಡೆಸಿ ಬಾಳೆ, ಕಬ್ಬು ಹಾಗೂ ಮುಸುಕಿನ ಜೋಳದ ಫಸಲನ್ನು ನಾಶಪಡಿಸಿವೆ.
ಇಲ್ಲಿನ ಚೆಕ್ಪೋಸ್ಟ್ ಬಳಿ ಯಿಂದಲೇ ಅರಣ್ಯ ಇಲಾಖೆ ಹಾಕಿರುವ ಸೋಲಾರ್ ಬೇಲಿಯನ್ನು ಮುರಿದಿರುವ ಆನೆಗಳು, ರಾಜು, ಸಲ್ಮಾ ಎಂಬುವವರ ಜಮೀನಿನಲ್ಲಿ ಹಾಕಲಾಗಿದ್ದ ಸೋಲಾರ್ ತಂತಿಯ ಕಂಬಗಳನ್ನೂ ಮುರಿದು ಒಳಕ್ಕೆ ನುಗ್ಗಿವೆ. ಕಟಾವಿಗೆ ಬಂದಿದ್ದ ಏಲಕ್ಕಿ ಬಾಳೆಯ ನೂರಕ್ಕೂ ಹೆಚ್ಚು ಗಿಡಗಳನ್ನು ನಾಶ ಪಡಿಸಿವೆ.
ಸಮೀಪದ ಜಮೀನಿನ ರತ್ನಮ್ಮ ಎಂಬುವವರ ಕಬ್ಬಿನ ಬೆಳೆಯನ್ನು ಹಾಳು ಮಾಡಿದ್ದು, ಮುಸುಕಿನ ಜೋಳವನ್ನು ತುಳಿದು ಹಾಕಿವೆ.‘ಬರದಿಂದ ತತ್ತರಿಸಿದ್ದ ರೈತರಿಗೆ ಬೆಳೆ ನಷ್ಟದ ಭೀತಿ ಆವರಿಸಿದ್ದು, ಅರಣ್ಯ ಇಲಾಖೆ ಪರಿಶೀಲನೆ ನಡೆಸಿ ನಷ್ಟ ಭರಿಸಿಕೊಡಬೇಕು’ ಎಂದು ಇಲ್ಲಿನ ರೈತರು ಆಗ್ರಹಿಸಿದ್ದಾರೆ.