ನಾಪೋಕ್ಲು: ಸಮೀಪದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಬುಧವಾರ ಸಾವಿರಾರು ಭಕ್ತರು ಪುಷ್ಕರ ಸ್ನಾನದಲ್ಲಿ ಪಾಲ್ಗೊಂಡರು. ಕಾವೇರಿ ನದಿಯಲ್ಲಿ ಸೆ. 23ರವರೆಗೆ ಹಮ್ಮಿಕೊಂಡಿರುವ ಪುಷ್ಕರ ಸ್ನಾನ ಕಾರ್ಯಕ್ರಮ ಮಂಗಳವಾರ ವಿವಿಧ ಪೂಜಾವಿಧಿವಿಧಾನಗಳೊಂದಿಗೆ ಆರಂಭವಾಯಿತು.
ಗುರುಗ್ರಹ ಆಯಾ ನದಿಗಳ ರಾಶಿಗೆ ಪ್ರವೇಶಿಸುವ ಸಂದರ್ಭ ವಿಶೇಷ ಶಕ್ತಿ ನದಿ ನೀರಿಗೆ ಬರುತ್ತದೆ ಎಂಬ ನಂಬಿಕೆ ಇದೆ. ಇದೇ ಕಾರಣದಿಂದ ದೇಶದ ಸಪ್ತ ನದಿಗಳಲ್ಲಿ ಪುಷ್ಕರ ಸ್ನಾನಾಚರಣೆ ಜರುಗುತ್ತಿದೆ.
ತಲಕಾವೇರಿಯಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಭಕ್ತರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿತ್ತು. ಆಂಧ್ರ ಪ್ರದೇಶದಿಂದ ಅಧಿಕ ಭಕ್ತರು ಪುಷ್ಕರ ಸ್ನಾನಕ್ಕೆ ಆಗಮಿಸಿದ್ದರು. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಕಾವೇರಿ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ದ್ವಿಗುಣವಾಗುವ ನಂಬಿಕೆಯಿಂದ ನೂರಾರು ಭಕ್ತರು ಕಾವೇರಿಯಲ್ಲಿ ಮಿಂದೆದ್ದು ಪ್ರಾರ್ಥನೆ ಸಲ್ಲಿಸಿದರು. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಭಕ್ತರೊಂದಿಗೆ ಸ್ಥಳೀಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.