ಕಾವಿಧಾರಿಗಳಿಂದ ಈ ದೇಶದಲ್ಲಿ ಎಂದಿಗೂ ಪರಿವರ್ತನೆಯಾಗಿಲ್ಲ. ಮೇಲಾಗಿ ಲಿಂಗಾಯತ ಧರ್ಮದಲ್ಲಿ ಮಠಗಳ ಸಂಸ್ಕೃತಿ ಬಂದಿದ್ದೇ 17-18ನೇ ಶತಮಾನದಲ್ಲಿ. ಒಬ್ಬ ವ್ಯಕ್ತಿಗೆ, ಸಂಸ್ಥೆಗೆ ಜೋತು ಬೀಳುವುದರಿಂದ ಸಾಂಘಿಕ ಹೋರಾಟ ಸೀಮಿತಗೊಳ್ಳುತ್ತದೆ. ಲಿಂಗಾಯತ ಧರ್ಮದ ಬೇಡಿಕೆಯು ಬಡವರ, ಅಸ್ಪೃಶ್ಯರ, ದಲಿತರ, ಶೋಷಿತರ, ಕಾರ್ಮಿಕರ, ದಮನಿತರ, ಮಹಿಳೆಯರ ಚಳವಳಿಯಾಗಲಿ. ಜನಾಂದೋಲನವು ಅರಿವು, ತತ್ವನಿಷ್ಠೆಯ ಮೇಲೆ ರೂಪುಗೊಳ್ಳಲಿ. ರಾಜಕೀಯ ಸಮಾವೇಶದಂತೆ ಜನರನ್ನು ಕೂಡಿಸಿ ಯಾವುದನ್ನೂ ಪಡೆಯದೆ ನಿರಾಶರಾಗುವುದು ಬೇಡ. ಲಿಂಗಾಯತ ಚಳವಳಿ ಅರಿವಿನ ಹನಿ ನೀರಾವರಿಯಾಗಬೇಕೇ ಹೊರತು ಶಕ್ತಿ ಪ್ರದರ್ಶನದ ಸುನಾಮಿಯಲ್ಲ.