ಹನುಮಸಾಗರ: ’ತೊಗರಿ ಬೆಳೆ ಎಂತಹ ಬರಗಾಲದಲ್ಲೂ ಕನಿಷ್ಠ ಮಟ್ಟದಲ್ಲಾದರೂ ಇಳುವರಿ ಕೊಡುವುದರ ಜತೆಗೆ ಮಣ್ಣಿಗೆ ಫಲವತ್ತತೆ ತುಂಬುತ್ತದೆ’ ಎಂದು ಜಿಲ್ಲಾ ಕೃಷಿ ವಿಸ್ತರಣಾ ಕೇಂದ್ರದ ಮುಂದಾಳು ಡಾ.ಎಂ.ಬಿ.ಪಾಟೀಲ ಹೇಳಿದರು.
ಸಮೀಪದ ಮದ್ನಾಳ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಕೃಷಿ ಇಲಾಖೆಯಿಂದ ಈಚೆಗೆ ರೈತರಿಗಾಗಿ ಹಮ್ಮಿಕೊಂಡಿದ್ದ ತೊಗರಿ ಬೆಳೆಯಲ್ಲಿ ತಾಂತ್ರಿಕತೆ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
‘ತೊಗರಿ ಸೇರಿದಂತೆ ದ್ವಿದಳ ಬೆಳೆಗಳನ್ನು ಬಿತ್ತನೆ ಮಾಡಿದ ನಂತರ ಬಿತ್ತುವ ಬೆಳೆಗಳಿಗೆ ಅಧಿಕ ಪೋಷಕಾಂಶ ದೊರಕುತ್ತದೆ. ಕಡಿಮೆ ನೀರಿನಲ್ಲೂ ಅಧಿಕ ಇಳುವರಿ ಕೊಡುವ ತೊಗರಿ ಬೆಳೆಗೆ ಉತ್ತಮ ಬೆಲೆ ಇದ್ದು ಆಹಾರದ ಕೊರತೆ ನೀಗಿಸುತ್ತದೆ’ ಎಂದರು.
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ವ್ಯವಸ್ಥಾಪಕ ಎಸ್.ಬಿ.ಕೋಣಿ ಮಾತನಾಡಿ, ‘ಮೆಕ್ಕೆಜೊಳದಂತಹ ಬೆಳೆಗಳಿಗೆ ಮಾರುಹೋಗುವುದರ ಬದಲು ಆಹಾರ ಬೆಳೆಯತ್ತ ರೈತರು ಗಮನಹರಿಸಬೇಕು‘ ಎಂದು ಸಲಹೆ ನೀಡಿದರು.
ತಾಲ್ಲೂಕು ಜ್ಞಾನ ಜ್ಯೋತಿ ಆರ್ಥಿಕ ಸಮಾಲೋಚಕ ದೊಡ್ಡಪ್ಪ ಜ್ಯೋತಿ ಮಾತನಾಡಿ, ‘ರೈತರು ಬೆಳೆ ವಿಮೆ ಬಗ್ಗೆ ಮಾಹಿತಿ ಅರಿತು ಪ್ರತಿ ವರ್ಷ ವಿಮೆ ಮಾಡುವುದರಿಂದ ಸರ್ಕಾರದ ಸೌಲಭ್ಯ ಪಡೆಯಲು ನೆರವಾಗುತ್ತದೆ. ಅಲ್ಲದೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಪಡೆದುಕೊಳ್ಳುವಂತೆ’ ತಿಳಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿರೂಪಾಕ್ಷಪ್ಪ ಹುನುಗುಂದ, ಸದಸ್ಯರಾದ ಭರಮಪ್ಪ ಹಟ್ಟಿ, ದುರುಗವ್ವ ಗೊರೆಬಾಳ, ಕೃಷಿ ಅಧಿಕಾರಿ ಶಿವಾನಂದ ಮಾಳಗಿ, ತಾಂತ್ರಿಕ ಅಧಿಕಾರಿ ಪ್ರಶಾಂತ, ಪ್ರಮುಖರಾದ ಉಮೇಶ, ತೋಟಪ್ಪ ಹೂಗಾರ, ಗಿರಿಯಪ್ಪ ತಳವಾರ, ಶಿವಪುತ್ರಪ್ಪ ಹೂಗಾರ ಇದ್ದರು. ಮುತ್ತಣ್ಣ ನರೆತಲಿ ಸ್ವಾಗತಿಸಿದರು.