ಚನ್ನಪಟ್ಟಣ: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಎದುರು ಪೊಲೀಸ್ ಇಲಾಖೆ ತರಬೇತಿ ಮೈದಾನದ ತಡೆಗೋಡೆ ಪಕ್ಕದಲ್ಲಿ ಪಾದಚಾರಿ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಇಲ್ಲಿ ಸಂಚರಿಸುವ ಪಾದಚಾರಿಗಳಿಗೆ ಕಂಟಕ ಎದುರಾಗಿದೆ.
ಕಳೆದ ಎರಡು ತಿಂಗಳಿನಿಂದ ಈ ರಸ್ತೆ ಯಲ್ಲಿ ಗುಂಡಿ ಬಿದ್ದಿದೆ. ಚರಂಡಿ ಮೇಲೆ ಸಿಮೆಂಟ್ ಚಪ್ಪಡಿ ಹಾಕಿ ನಿರ್ಮಾಣ ಮಾಡಿರುವ ಈ ರಸ್ತೆಯಲ್ಲಿ ಗುಂಡಿ ಬಿದ್ದಿರುವುದರಿಂದ ಆಕಸ್ಮಿಕವಾಗಿ ಗುಂಡಿಗೆ ಕಾಲು ಹಾಕಿದರೆ ಚರಂಡಿ ಒಳಗೆ ಬೀಳುವ ಸಂಭವವಿದೆ ಎಂದು ಪೊಲೀಸ್ ಇಲಾಖೆಯ ಸಿದ್ದಪ್ಪ ಎಂಬುವರು ಆರೋಪಿಸಿದ್ದಾರೆ.
ಸುಮಾರು 5ಅಡಿಯಷ್ಟು ಅಗಲವಾಗಿರುವ ಈ ಗುಂಡಿಯಲ್ಲಿ ಮಕ್ಕಳು ಕಾಲು ಇಟ್ಟರೆ ಚರಂಡಿಗೆ ಬೀಳುವ ಸಂಭವ ಹೆಚ್ಚು. ಇದು ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಕ್ಕೆ ಸಮೀಪವೇ ಇರುವುದರಿಂದ ಹಾಗೆಯೆ ಪೊಲೀಸ್ ತರಬೇತಿ ಮೈದಾನ ಈ ರಸ್ತೆಯಲ್ಲಿಯೆ ಇರುವುದರಿಂದ ಇಲ್ಲಿ ಹೆಚ್ಚು ಜನರ ಸಂಚಾರವಿದೆ.
ಇದೇ ರಸ್ತೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್, ಸರ್ಕಾರಿ ಪದವಿ ಕಾಲೇಜು ಇರುವುದರಿಂದ ಈ ರಸ್ತೆಯಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ಸಹ ಸಂಚರಿ ಸುತ್ತಾರೆ. ರಾತ್ರಿಯ ವೇಳೆಯೂ ಸಹ ಜನರು ಸಂಚರಿಸುವುದರಿಂದ ಗುಂಡಿ ಕಾಣಿಸದೆ ಗುಂಡಿಗೆ ಬೀಳುವ ಸಾಧ್ಯತೆ ಎಂದು ದೂರಿದ್ದಾರೆ.