ತಾಳಿಕೋಟೆ: ‘ಜಾತಿ, ಧರ್ಮ, ಪಂಥಗಳ ಸೋಂಕಿಲ್ಲದ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡುವ ಶಿಕ್ಷಣ ವ್ಯವಸ್ಥೆ ಇಂದಿನ ತುರ್ತು’ ಎಂದು ಶಾಸಕ ಹಾಗೂ ದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ಸಂಗಮೇಶ್ವರ ಸಭಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಎಸ್.ರಾಧಾಕೃಷ್ಣನ್ ಜನ್ಮ ದಿನೋತ್ಸವ, ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ‘ಮಕ್ಕಳಲ್ಲಿ ಮಾನವೀಯ ಮೌಲ್ಯ ಗಳನ್ನು ಬೆಳೆಸುವಂತಹ ಶಿಕ್ಷಣವನ್ನೂ ನೀಡಬೇಕು’ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
‘ಮುಂದಿನ ಜನೆವರಿಯಿಂದ ನೂತನ ತಾಲ್ಲೂಕು ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಮೊದಲ ಆದ್ಯತೆಯಾಗಿ ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾ ಧಿಕಾರಿ ಕಚೇರಿಯನ್ನು ಆರಂಭಿಸಲಾಗುವುದು’ ಎಂದೂ ಭರವಸೆ ನೀಡಿದರು.
ಮಕ್ಕಳ ಸಾಹಿತಿ ಪ್ರೊ.ಚಂದ್ರಗೌಡ ಕುಲಕರ್ಣಿ ಮಾತನಾಡಿ, ‘ಮಕ್ಕಳಿಗೆ ಕಲಿಸುವುದಕ್ಕಿಂತ ಕಲಿಯಲು ಅವಕಾಶ ಕಲ್ಪಿಸಿ ಕೊಡುವವ ನಿಜವಾದ ಶಿಕ್ಷಕ’ ಎಂದರು.
ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷೆ ಅಕ್ಕಮಹಾದೇವಿ ಕಟ್ಟಿಮನಿ ವಹಿಸಿದ್ದರು.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಪ್ರಭು ಗೌಡ ದೇಸಾಯಿ, ಸದಸ್ಯ ಬಸನಗೌಡ ವಣಿಕ್ಯಾಳ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಚನ್ನಮ್ಮ ಭೀ.ತಂಗಡಗಿ, ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಿ.ಎಸ್. ಪಾಟೀಲ ಯಾಳಗಿ , ತಹಶೀಲ್ದಾರ್ ಎಂ.ಎ.ಎಸ್.ಬಾಗವಾನ ಇದ್ದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್.ಪಾಟೀಲ, ಎಸ್.ಎಸ್.ಗಡಗಿ, ಎಸ್.ಬಿ.ಮಂಗಳೂರ, ಶಿಕ್ಷಕರಾದ ಬಿ.ಎಸ್.ಹೊಳಿ, ಎ.ಡಿ.ಗೊನಾಳ, ಆರ್.ಎಲ್.ಕೊಪ್ಪದ, ಆರ್.ಎಂ. ಡೋಣಿ, ಟಿ.ಎಸ್.ಲಮಾಣಿ ಅವರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಂ. ಬೆಳಗಲ್ಲ ಸ್ವಾಗತಿಸಿದರು, ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ ಗುರು ಚೇತನ ಕಾರ್ಯಕ್ರಮ ಕುರಿತು ಮಾತನಾಡಿದರು.