ಮಂಡ್ಯ: ವಿವಿಧ ಸಂಘಟನೆಗಳ ಮುಖಂಡರು ನಗರದಾದ್ಯಂತ ಶುಕ್ರವಾರ ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನ ಆಚರಿಸಿದರು. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸರ್.ಎಂ.ವಿ ಪ್ರತಿಮೆಗೆ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಮಾಲಾರ್ಪಣೆ ಮಾಡಿದರು. ಜಯ ಕರ್ನಾಟಕ ಸಂಘಟನೆ, ಜಿಲ್ಲಾ ಬ್ರಾಹ್ಮಣ ಸಭಾ ಸೇರಿ ಅಭಿನವ ಭಾರತಿ ಶಾಲೆ, ಕಾಳೇಗೌಡ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರತಿಮೆಗೆ ಪಾಲಾರ್ಪಣೆ ಮಾಡಿ ಸರ್.ಎಂ.ವಿ ಅವರ ಕೊಡುಗೆಗಳನ್ನು ನೆನೆದರು.
ವಿಶ್ವೇಶ್ವರಯ್ಯ ಕೊಡುಗೆ ಅಪಾರ: ಸರ್ ಎಂ.ವಿ ಗೆಳೆಯರ ಬಳಗದ ಸದಸ್ಯರು ಹೊಸಹಳ್ಳಿ ಬಡಾವಣೆಯಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಜನರಿಗೆ ಸಿಹಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಹೊಸಹಳ್ಳಿ ಶಿವು, ಅಂದು ಬೆಂಗಾಡಾಗಿದ್ದ ಜಿಲ್ಲೆಗೆ ಕಾವೇರಿ ನೀರು ತರುವ ಮೂಲಕ ಜನರ ಪಾಲಿಗೆ ಭಗೀರಥರಾಗಿದ್ದಾರೆ, ಇಂದಿಗೂ ಜಿಲ್ಲೆಯ ಜನ ತಮ್ಮ ಮನೆಯ ದೇವರ ಕೋಣೆಯಲ್ಲಿ ನಾಲ್ವಡಿ ಕೃಷ್ಣರಾಜಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರ ಇಟ್ಟು ಪೂಜಿಸುತ್ತಾರೆ. ಕೆಲವರು ಬದುಕಿದ್ದರೂ ಸತ್ತಂತೆ ಇರುತ್ತಾರೆ. ಆದರೆ ವಿಶ್ವೇಶ್ವರಯ್ಯ ಅವರು ನಮ್ಮ ಜೊತೆ ಇಲ್ಲದಿದ್ದರೂ ಅವರ ಮಾಡಿರುವ ಮಹಾನ್ ಕಾರ್ಯಗಳು ಜಿಲ್ಲೆಯಲ್ಲಿ ಜೀವಂತವಾಗಿವೆ’ ಎಂದು ಹೇಳಿದರು.
‘ಮೈಸೂರು ಸಂಸ್ಥಾನದ ದಿವಾನ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ವಿಶ್ವೇಶ್ವರಯ್ಯ ತಮ್ಮ ಅಧಿಕಾರಾವಧಿಯಲ್ಲಿ ಕೃಷ್ಣರಾಜ ಸಾಗರ ಆಣೆಕಟ್ಟು, ಏಷ್ಯಾದಲ್ಲಿ ಮೊದಲ ಬಾರಿಗೆ ಜಲ ವಿದ್ಯುತ್ ಉತ್ಪಾದನಾ ಕೇಂದ್ರ, ಎಚ್.ಎ.ಎಲ್, ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೃಷಿ ಸಂಶೋಧನಾ ಕೇಂದ್ರ, ಮೈಸೂರು ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್, ಮೈ ಷುಗರ್ ಕಾರ್ಖಾನೆ ಪ್ರಾರಂಭಿಸಿ ರಾಜ್ಯದ ಸಾವಿರಾರು ಜನರ ಬದುಕಿಗೆ ದಾರಿ ದೀಪವಾಗಿದ್ದಾರೆ’ ಎಂದು ಹೇಳಿದರು. ಬಿಜೆಪಿ ನಗರದ ಘಟಕದ ಅಧ್ಯಕ್ಷ ಎಚ್.ಆರ್.ಅರವಿಂದ್, ಮುಖಂಡರಾದ ಸಿ.ಟಿ.ಮಂಜುನಾಥ್ ಹಾಜರಿದ್ದರು. ನೂರು ಅಡಿ ರಸ್ತೆಯಲ್ಲಿ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಹೆಮ್ಮಿಗೆ ಗ್ರಾಮದಲ್ಲಿ ಜನ್ಮದಿನ: ತಾಲ್ಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ವಿಶ್ವೇಶ್ವರಯ್ಯ ಜಯಂತಿ ನಡೆಯಿತು. ಡಾ.ಲಕ್ಷ್ಮೀಶ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘ (ಮೂಲ ಸಂಘಟನೆ) ತಾಲ್ಲೂಕು ಘಟಕದ ಅಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್ ‘ಜಿಲ್ಲೆಗೆ ಸರ್.ಎಂ.ವಿಶ್ವೇಶ್ವರಯ್ಯ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರು ವೈಜ್ಞಾನಿಕ ಮನೋಭಾವ ಹೊಂದಿದ್ದ ಶ್ರೇಷ್ಠ ಎಂಜಿನಿಯರ್ ಆಗಿದ್ದರು. ಅವರು ನೀಡಿದ ಯೋಜನೆಗಳು ಇಂದಿಗೂ ವಿಶ್ವಪ್ರಸಿದ್ಧವಾಗಿವೆ. ಹೀಗಾಗಿ ಸರ್.ಎಂ.ವಿ ಅವರನ್ನು ನೆನೆಯಬೇಕು’ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.