ಅಜ್ಜಂಪುರ: ವೀರಶೈವ ಮತ್ತು ಲಿಂಗಾಯತ ಎಂಬ ಭಿನ್ನವಿಲ್ಲ, ಅವೆರಡೂ ಒಂದೇ. ಆದರೆ, ಸಮಾಜವನ್ನು ಹೋಳು ಮಾಡಿ ಅದರ ಲಾಭ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ ಎಂದು ಸಂಸದೆ ಶೋಭ ಕರಂದ್ಲಾಜೆ ಆರೋಪಿಸಿದರು.
ಪಟ್ಟಣಕ್ಕೆ ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ‘ವೀರಶೈವ ಲಿಂಗಾಯತ ಸಮಾಜವನ್ನು ಯಡಿಯೂರಪ್ಪ ಅವರಿಂದ ದೂರ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ಸಚಿವರೊಂದಿಗೆ ಸೇರಿ ಈ ಷಡ್ಯಂತರ ರೂಪಿಸಿದ್ದಾರೆ. ಇದು ಫಲಕಾರಿಯಾಗುವುದಿಲ್ಲ’ ಎಂದು ತಿಳಿಸಿದರು.
ಕೇಂದ್ರದ ಆಡಳಿತ ಪರ ಜನಸಾಮಾನ್ಯರ ಒಲವು ನೋಡಿರುವ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ಅವರಿಗೆ ಸೋಲಿನ ಭಯ ಕಾಡುತ್ತಿದೆ. ಆಗಾಗಿಯೇ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸಿ, ಪೊಲೀಸರ ಮೂಲಕ ಬಿಜೆಪಿಯ ಮಂಗಳೂರು ಚಲೋ ತಡೆದರು. ಇದಕ್ಕೆ ಮುಂಬರುವೋ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದರು.