ಹೊಸನಗರ: ರಾಜಕೀಯ ಜೀವನ ಪೂರ್ಣ ಬಿಜೆಪಿ ಪಕ್ಷಕ್ಕೆ ಮುಡಿಪಾಗಿಟ್ಟ ತಮಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ಟಿಕೆಟ್ ನೀಡಲಿದ್ದಾರೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ವಿಶ್ವಾಸ ವ್ಯಕ್ತಪಡಿಸಿದರು. ತಾಲ್ಲೂಕಿನ ಮೂಲೆಗದ್ದೆ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದ ನಂತರ ಸುದ್ದಿಗೋಷ್ಠಿಯಲ್ಲಿ ಜತೆ ಮಾತನಾಡಿದರು.
ಸೊರಬ ಹಾಗೂ ಸಾಗರ ಎರಡೂ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಯ ಕೆಲಸ ಮಾಡುವಂತೆ ಪಕ್ಷದ ವರಿಷ್ಠರು ನೀಡಿದ ಸೂಚನೆ ಪಾಲಿಸಲಾಗುತ್ತಿದೆ ಎಂದರು.
ಹೊಸನಗರ ಹಾಗೂ ಸೊರಬ ಎರಡೂ ವಿಧಾನ ಸಭಾ ಕ್ಷೇತ್ರದಿಂದ ಈ ಹಿಂದೆ ಶಾಸಕನಾಗಿ ಕಾರ್ಯನಿರ್ವಹಿಸಿದ ತಮಗೆ ಪಕ್ಷದ ಜವಾಬ್ದಾರಿ ಹೊರೆಯಾಗಲಾರದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಮ್ಮೆ ಶಾಸಕನಾಗಿದ್ದ ತಮಗೆ ಸೊರಬ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಅನುಕಂಪದ ಪ್ರಭಾವದ ಮೇಲೆ ತಮಗೆ ಸೋಲು ಆಗಿತ್ತು. ಈ ಬಾರಿ ಪರಿಸ್ಥಿತಿ ಬದಲಾಗಿದೆ ಎಂದರು.
ವ್ಯಾಪಕ ಭ್ರಷ್ಟಾಚಾರ: ಸಚಿವ ಕಾಗೋಡು ತಿಮ್ಮಪ್ಪ ಇವರ ಹೋರಾಟ ಮನೋಭಾವ ಮೆಚ್ಚುಗೆ ಇದೆ. ಆದರೆ ಅವರು ಮಾಡಿದ ಅಭಿವೃದ್ಧಿ ಕಾರ್ಯವನ್ನು ಅವರ ಕೆಳ ಹಂತಕ್ಕೆ ತಲುಪಿಸುವ ಕಾರ್ಯದಲ್ಲಿ ಪಕ್ಷದ ಮುಖಂಡರು ವ್ಯಾಪಕ ಭ್ರಷ್ಟಾಚಾರ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು.
ತಮ್ಮ ಮೇಲಿನ ಎಲ್ಲಾ ಆರೋಪ ಮುಕ್ತವಾಗಿದೆ. ತಾವು ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಕಾರ್ಯಗಳು, ಜನಸಂಪರ್ಕ ಮುಂದಿನ ಚುನಾವಣೆಯಲ್ಲಿ ತಮ್ಮ ಕೈ ಹಿಡಿಯಲಿದೆ ಎಂದರು. ಪುರಾಣ ಪ್ರಸಿದ್ಧ ತಾಲ್ಲೂಕಿನ ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಸ್ಥಾನದ ಜಾತ್ರೆಗೆ ಭೇಟಿ ನೀಡಿ ಅವರು ಹರಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಂಡಾನಿ ಮೋಹನ, ಬಸವರಾಜ, ಕಂಕಳಲೆ ಜಯಕುಮಾರ, ಎ.ಟಿ.ನಾಗರತ್ನ, ರಾಜೇಶ ಕೀಳಂಬಿ, ಮಾಧ್ಯಮ ಪ್ರಮುಖ ತೀರ್ಥೇಶ ಮತ್ತಿತರರು ಹಾಜರಿದ್ದರು.