ಬೇಲೂರು: ‘ತಾಲ್ಲೂಕಿನ ಮಾಳೇಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನವಿಲುಗಳು ಮಾರಣಹೋಮ ನಡೆಯುತ್ತಿದ್ದು, ಅರಣ್ಯ ಇಲಾಖೆ ಇದನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು’ ಎಂದು ಮಾಳೇಗೆರೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘ಮಾಳೇಗೆರೆ ಮತ್ತು ಚಂದನಹಳ್ಳಿ ಸುತ್ತಮುತ್ತಲ ಪ್ರದೇಶಗಳಿಗೆ ನಿತ್ಯ ಮುಂಜಾನೆ 5.30ರ ಹೊತ್ತಿಗೆ ಬರುವ ಕೆಲ ಹಕ್ಕಿಪಿಕ್ಕಿ ಜನಾಂಗದವರು ನವಿಲುಗಳನ್ನು ಭೇಟೆಯಾಡಿ ಅದರ ಮಾಂಸವನ್ನು ತಿನ್ನುವುದಲ್ಲದೆ, ಅದರ ರೆಕ್ಕೆಗಳನ್ನು ಕಿತ್ತು ಮಾರಾಟ ಮಾಡುತ್ತಿದ್ದಾರೆ.
ಇದರಿಂದಾಗಿ ನವಿಲುಗಳ ಸಂತತಿ ದಿನೇದಿನೇ ನಶಿಸುತ್ತಿದೆ. ಅರಣ್ಯ ಇಲಾಖೆಗೆ ಈ ವಿಚಾರ ತಿಳಿದಿದ್ದರೂ ಕ್ರಮಕೈಗೊಳ್ಳುತ್ತಿಲ್ಲ. ನವಿಲುಗಳ ಹತ್ಯೆ ತಡೆಗಟ್ಟುವಂತೆ ಆಗ್ರಹಿಸಿ ಸೆ. 18ರಂದು ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಗ್ರಾಮದ ಮುಖಂಡ ಎಂ.ಎಸ್.ಚಂದ್ರಶೇಖರಗೌಡ ಎಚ್ಚರಿಸಿದ್ದಾರೆ.