ಶಿರ್ವ: ಉಡುಪಿಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯಾಗಿಸಲು ಜಿಲ್ಲಾಡಳಿತ ಪಣತೊಟ್ಟಿದೆ. ಆದರೆ ಕಟಪಾಡಿ-ಸುಭಾಸ್ನಗರ ಮಧ್ಯದಲ್ಲಿ ರಾಜ್ಯಹೆದ್ದಾರಿ ನಾರುತ್ತಿದೆ. ಗಾಳಿಯಲ್ಲಿ ಪ್ಲಾಸ್ಟಿಕ್ ಹಾರಾಡುತ್ತಿದ್ದರೂ ಸ್ಥಳೀಯಾಡಳಿತ ಸ್ವಚ್ಛಗೊಳಿಸಲು ಸಿದ್ಧವಾಗಿಲ್ಲ.
ಕಟಪಾಡಿ-ಸುಭಾಸ್ನಗರ ರಸ್ತೆಯ ರೈಲ್ವೇ ಸೇತುವೆ ರಸ್ತೆಯ ಮೇಲ್ಭಾಗದಲ್ಲಿ ಕಸದ ರಾಶಿಯೇ ಬೆಳೆಯುತ್ತಿದೆ. ಹಸಿ ತ್ಯಾಜ್ಯದಿಂದಾಗಿ ಮಳೆನೀರಿಗೆ ಕೊಳೆತು ನಾರುತ್ತಿದೆ. ಪ್ಲಾಸ್ಟಿಕ್ ಪಾರ್ಸೆಲ್, ಹೋ ಟೆಲ್ ತ್ಯಾಜ್ಯ, ತಿಂಡಿಯ ವಾಸನೆಗೆ ಬೀದಿ ನಾಯಿಗಳ ಕಚ್ಚಾಟ ಇಲ್ಲಿ ತೀವ್ರವಾಗಿದೆ.
ಕಟಪಾಡಿ-ಶಂಕರಪುರ-ಶಿರ್ವ-ಬೆಳ್ಮಣ್ ಮುಖ್ಯ ರಸ್ತೆಯಾಗಿದ್ದರಿಂದ ಪ್ರತೀ ನಿತ್ಯ ಸಾವಿರಾರು ವಾಹನಗಳು ಸಂಚಾರ, ಪಾದಚಾರಿಗಳು ಈ ರಸ್ತೆ ಯಲ್ಲಿ ಸಾಗುತ್ತಿರುತ್ತಾರೆ. ಗಾಳಿಗೆ ಪ್ಲಾಸ್ಟಿಕ್ ಚೀಲ, ಕವರ್ಗಳು, ಕಾಗದ ಮುಂತಾದ ಹಗುರ ವಸ್ತುಗಳು ರಸ್ತೆಯುದ್ದಕ್ಕೂ ಚೆಲ್ಲಾಡುತ್ತಿರುತ್ತವೆ.
‘ಪಾದಚಾರಿಗಳಿಗೂ ಈ ಹಾದಿಯಲ್ಲಿ ಸಾಗಬೇಕಾದರೆ ಇಲ್ಲಿನ ತ್ಯಾಜ್ಯ ರಾಶಿ ವಾಕರಿಕೆ ಬರಿಸುವಂತಿದೆ. ನಿತ್ಯ ಪ್ರಯಾಣಿಕರು ಮೂಗುಮುಚ್ಚಿಕೊಂಡೇ ಸಾಗುವುದು ಅನಿವಾರ್ಯವೆನಿಸಿದೆ. ಸ್ಥಳೀಯ ವಾರ್ಡ್ ಪ್ರತಿನಿಧಿಗಳಿಗೆ ಚುನಾವಣೆ ಕಾಲದಲ್ಲಿ ಮಾತ್ರ ಜನರ ಬಗ್ಗೆ ಕಾಳಜಿ ಮೂಡುತ್ತದೆ’ ಎಂದು ಸ್ಥಳೀಯರು ದೂರಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಜನಜಾಗೃತಿ ಜಾಥಾ, ಅಭಿಯಾನಗಳ ಸರಣಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. . ಜನಪ್ರತಿನಿಧಿ ಆದಿಯಾಗಿ ಆಡಳಿತದ ಪ್ರಧಾನ ಸೂತ್ರದಾರರಿಗೆ, ವಿವಿಧ ಸಂಘಟನೆಗಳ ನಾಯಕರಿಗೆ, ಕಾರ್ಯಕರ್ತರಿಗೆ ತರಬೇತಿಗಳೂ ನಡೆದಿವೆ.
ಒಣ,ಹಸಿ.ಪ್ಲಾಸ್ಟಿಕ್ ತ್ಯಾಜ್ಯ ಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ವಿಲೇವಾರಿ ಕ್ರಮಗಳ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ. ಇಷ್ಟೆಲ್ಲಾ ನಡೆದರೂ ವಿದ್ಯಾವಂತ, ಪ್ರಜ್ಞಾವಂತರೆನಿಸಿದ ಜನರು ತಮ್ಮ ಮನೆಗಳಲ್ಲಿ ಸಂಗ್ರಹವಾದ ಕಸವನ್ನು ಯಾವುದೇ ಮುಲಾಜಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ, ಮುಖ್ಯ ರಸ್ತೆಗಳ ಬದಿಯಲ್ಲಿ ರಾಜಾರೋಷವಾಗಿ ಎಸೆಯುವುದು ಮಾತ್ರ ಇನ್ನೂ ನಿಂತಿಲ್ಲ.
ಸ್ಥಳೀಯ ಆಡ ಳಿತ ಈ ಪ್ರದೇಶದಲ್ಲಿ ಕಸದ ರಾಶಿಗೆ ದುರ್ನಾತಕ್ಕೆ ಮುಕ್ತಿ ನೀಡಲು ಕ್ರಮ ಕೈ ಗೊಳ್ಳಬೇಕು ಎಂದು ಪ್ರಯಾಣಿಕರು, ಪಾದಚಾರಿಗಳು ಒತ್ತಾಯಿಸಿದ್ದಾರೆ.
ಪ್ರಕಾಶ್ ಕಟಪಾಡಿ, ಶಿರ್ವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.