ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾತ್ರಿ’ ಕಾಮಗಾರಿ: ₹ 4.32 ಕೋಟಿ ಅವ್ಯವಹಾರ

Last Updated 18 ಸೆಪ್ಟೆಂಬರ್ 2017, 9:49 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ಸಂದಾಯವಾಗಿಲ್ಲ. ಆದರೆ, ಅಧಿಕಾರಿಗಳ ಜೇಬು ಸೇರಿದೆ.
ಜಿಲ್ಲೆಯ ಕೆಲ ಗ್ರಾಮ ಪಂಚಾಯ್ತಿಗಳಲ್ಲಿ ‘ನರೇಗಾ’, 14ನೇ ಹಣಕಾಸು, ಬಿಆರ್‌ಜಿಎಫ್‌, ವರ್ಗ–1, ನೈರ್ಮಲ್ಯ ಯೋಜನೆ... ಹೀಗೆ ವಿವಿಧ ಯೋಜನೆಗಳ ಕಾಮಗಾರಿಯಲ್ಲಿ ಅಂದಾಜು ₹ 4.32 ಕೋಟಿ ಅವ್ಯವಹಾರ ನಡೆದಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಹಾಗೂ ಅಧಿಕಾರಿಗಳ ವಿರುದ್ಧ ಈಗಾಗಲೇ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

ಕೆಲ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಅಧಿಕಾರಿಗಳು ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದು ಅದೇ ಸ್ಥಳದಲ್ಲಿ ಕೆಲಸ ನಿರ್ವಹಿಸುವ ಮೂಲಕ ‘ಸಾಮರ್ಥ್ಯ’ ಪ್ರದರ್ಶಿಸಿದ್ದಾರೆ. ಇದಕ್ಕೆ ಜಿಲ್ಲಾ ಪಂಚಾಯ್ತಿಯ ಕೆಲ ಹಿರಿಯ ಅಧಿಕಾರಿಗಳ ‘ಆಶೀರ್ವಾದ’ ಕೂಡ ಇದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇನ್ನು ಕೆಲ ಅಧಿಕಾರಿಗಳನ್ನು ಬೇರೆ ಸ್ಥಳಕ್ಕೆ ನಿಯೋಜಿಸಲಾಗಿದೆ.

ಜಗಳೂರು, ಹರಪನಹಳ್ಳಿ ಹಾಗೂ ಹೊನ್ನಾಳಿ ತಾಲ್ಲುಕುಗಳ ಕೆಲ ಗ್ರಾಮ ಪಂಚಾಯ್ತಿಗಳಲ್ಲಿ ಈ ಹಿಂದೆ ವಿವಿಧ ಯೋಜನೆಗಳ ಅಡಿಯಲ್ಲಿ ನಡೆದ ಕೆರೆ ಹೂಳೆತ್ತುವುದು, ರಸ್ತೆ ನಿರ್ಮಾಣ, ಕುಡಿಯುವ ನೀರು ಪೂರೈಕೆ, ಬೀದಿ ದೀಪ ಹಾಗೂ ಗ್ರಾಮ ನೈರ್ಮಲ್ಯ ನಿರ್ವಹಣೆ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ.

10 ಗ್ರಾ.ಪಂ.ಗಳಲ್ಲಿ ಅವ್ಯವಹಾರ: ಜಗಳೂರು ತಾಲ್ಲೂಕಿನ 8 ಗ್ರಾಮ ಪಂಚಾಯ್ತಿ, ಹರಪನಹಳ್ಳಿ ಹಾಗೂ ಹೊನ್ನಾಳಿ ತಾಲ್ಲೂಕುಗಳ ತಲಾ ಒಂದು ಗ್ರಾಮ ಪಂಚಾಯ್ತಿಗಳಲ್ಲಿ ಇದುವರೆಗೆ ಒಟ್ಟು ₹ 4.32 ಕೋಟಿ ಅವ್ಯವಹಾರ ಬಹಿರಂಗವಾಗಿದೆ. ಆದರೆ, ₹ 20 ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂಬುದು ಜಿಲ್ಲಾ ಜಾಗೃತಿ ಸಮಿತಿ ಸದಸ್ಯರ ಆರೋಪ.

ಕ್ರಮಕ್ಕೆ ಪತ್ರ: ಜಗಳೂರು ತಾಲ್ಲೂಕಿನ ಅಣಬೂರು, ಬಿಳಿಚೋಡು, ಬಿಸ್ತುವಳ್ಳಿ, ಕೆಚ್ಚೇನಹಳ್ಳಿ, ಹನುಮಂತಾಪುರ, ದಿದ್ದಿಗೆ, ದೊಣ್ಣೆಹಳ್ಳಿ ಹಾಗೂ ತೋರಣಗಟ್ಟೆ ಗ್ರಾಮ ಪಂಚಾಯ್ತಿಗಳಲ್ಲಿ ನಡೆದ ಕಾಮಗಾರಿಗಳಲ್ಲಿ ₹ 4 ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ. ಇದರಲ್ಲಿ ಹನುಮಂತಾಪುರ ಗ್ರಾಮ ಪಂಚಾಯ್ತಿ ಒಂದರಲ್ಲಿಯೇ ₹ 1.83 ಕೋಟಿ ಹಣ ದುರುಪಯೋಗವಾಗಿದೆ.

ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಮತ್ತು ಹೊನ್ನಾಳಿಯ ಚಟ್ನಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿಯೂ ಅವ್ಯವಹಾರ ನಡೆದಿದೆ. ಈ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಅಶ್ವತಿ ಪತ್ರ ಬರೆದಿದ್ದಾರೆ. ಆದರೆ, ಫಲಿತಾಂಶ ಮಾತ್ರ ಶೂನ್ಯ!

ಕಾಮಗಾರಿ ಹಣ ಲೂಟಿ!: ‘ನರೇಗಾ’ ಕಾಮಗಾರಿ ಎಂದರೆ ಸರ್ಕಾರದ ಹಣವನ್ನು ಲೂಟಿ ಮಾಡುವುದು ಎಂದು ಕೆಲ ಅಧಿಕಾರಿಗಳು ಅರ್ಥೈಸಿಕೊಂಡಿದ್ದಾರೆ. ಜಗಳೂರು ತಾಲ್ಲೂಕಿನಲ್ಲಿ ಇಂತಹ ಅಧಿಕಾರಿ ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರನ್ನು ಕಾಣಬಹುದು. ಇದಕ್ಕೆ ಸ್ಥಳೀಯ ಕೆಲ ರಾಜಕಾರಣಿ ಹಾಗೂ ಹಿರಿಯ ಅಧಿಕಾರಿಗಳ ಬೆಂಬಲವೂ ಇದೆ’ ಎಂದು ಜಿಲ್ಲಾ ಜಾಗೃತ ಸಮಿತಿ ಸದಸ್ಯ ಆರ್‌.ಲಕ್ಷ್ಮಣ್‌ ದೂರುತ್ತಾರೆ.

ಇಲ್ಲಿನ ತೋರಣಗಟ್ಟೆ ಗ್ರಾಮ ಪಂಚಾಯ್ತಿಯಲ್ಲಿ 2 ಕೊಳವೆಬಾವಿ ಮೋಟರ್‌ ಖರೀದಿಸಿ, 14 ಮೋಟರ್‌ಗಳಿಗೆ ಬಿಲ್‌ ಹಾಕಲಾಗಿದೆ. ಬಸವನಕೋಟೆ ವ್ಯಾಪ್ತಿಯಲ್ಲಿಯೂ ಸುಮಾರು ₹ 40 ಲಕ್ಷ ಅವ್ಯವಹಾರ ನಡೆದಿದೆ. ಜಗಳೂರು ತಾಲ್ಲೂಕಿನ 7 ಗ್ರಾಮ ಪಂಚಾಯ್ತಿಯಲ್ಲಿ ಸರ್ಕಾರದ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗಿದೆ. ಈಗಾಗಲೇ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದ್ದು, ಇಲಾಖಾ ತನಿಖೆ ನಡೆಯತ್ತಿದೆ ಎಂದು ಹೇಳಲಾಗುತ್ತದೆ. ಆದರೆ, ಇದೆಲ್ಲವೂ ನೆಪ ಮಾತ್ರಕ್ಕೆ ಎನ್ನುತ್ತಾರೆ ಅವರು.

ಕ್ರಿಮಿನಲ್‌ ಆರೋಪಗಳನ್ನು ಎದುರಿಸುತ್ತಿರುವ ಕೆಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಪಿಡಿಒಗಳಿಗೂ ಅದೇ ಸ್ಥಾನದಲ್ಲಿ ಮುಂದುವರಿಯಲು ಹಿರಿಯ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಕಳ್ಳರ ಕೈಗೆ ಖಜಾನೆಯ ಬೀಗ ಕೊಟ್ಟಂತಾಗಿದೆ. ಇದಕ್ಕೆ ಪರ್ಯಾಯವಾಗಿ ಅಧಿಕಾರಿಗಳಿಗೆ ನಿಗದಿತ ‘ಪಾಲು’ ಸಂದಾಯವಾಗುತ್ತಿದೆ’ ಎಂಬುದು ಅವರ ದೂರು.
  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT