ತಿಪ್ಪಸಂದ್ರ(ಮಾಗಡಿ): ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ದಿನಾಂಕ ಗೊತ್ತು ಮಾಡಿದಂದು ಜೆಡಿಎಸ್ ಸೇರುವುದು ಖಚಿತ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ತಿಳಿಸಿದರು.
ಐಯ್ಯಂಡಹಳ್ಳಿಯಲ್ಲಿ ಭಾನುವಾರ ನಡೆದ ಎ.ಮಂಜುನಾಥ ಅವರ ಸ್ವಾಭಿಮಾನಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ತಾಲ್ಲೂಕಿನ ಪ್ರತಿಯೊಂದು ಹೋಬಳಿ ಕೇಂದ್ರದಲ್ಲೂ ಸ್ವಾಭಿಮಾನಿಗಳ ಸಮಾವೇಶ ಏರ್ಪಡಿಸಿ, ಕಾರ್ಯಕರ್ತರ ಅಭಿಪ್ರಾಯ ಆಲಿಸಿದ ನಂತರ ಜೆಡಿಎಸ್ ಸೇರುವುದಾಗಿ ಹೇಳಿದರು.
‘ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಏಳು ಸಾವಿರ ಕನಿಷ್ಠ ಮತ ಪಡೆಯುವ ಹೀನಾಯ ಸ್ಥಿತಿ ಇತ್ತು. ಅದನ್ನು ಹೋಗಲಾಡಿಸಿ ಪಕ್ಷ ಸಂಘಟನೆಗೆ ಡಿ. ಕೆ. ಶಿವಕುಮಾರ್, ಸಿ.ಎಂ. ಲಿಂಗಪ್ಪ, ಡಿ.ಕೆ. ಸುರೇಶ್, ಎಚ್.ಎಂ.ರೇವಣ್ಣ ನೇಮಿಸಿದಾಗ ಸಂತಸದಿಂದಲೇ ಒಪ್ಪಿದ್ದೆ. ವರಿಷ್ಠರು, ಪಕ್ಷದಿಂದ ಹಣ ಪಡೆಯದೆ ಹತ್ತು ವರ್ಷಗಳಿಂದ ಪಕ್ಷಕ್ಕಾಗಿ ಶ್ರಮಿಸಿದ್ದೆ’ ಎಂದರು. ಇದರಿಂದ ಸುಮಾರು 75 ಸಾವಿರ ಮತಗಳ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಶಾಸಕ ಎಚ್.ಸಿ, ಬಾಲಕೃಷ್ಣ, ಇಪ್ಪತ್ತು ವರ್ಷಗಳಿಂದ ನಾಲ್ಕು ಬಾರಿ ಬೇರೆ ಪಕ್ಷದ ಕಾರ್ಯಕರ್ತರ ಮೇಲೆ ಕೇಸುಗಳನ್ನು ಹಾಕಿಸಿ ಜೈಲಿಗೆ ಕಳುಹಿಸಿ ದೌರ್ಜನ್ಯ ನಡೆಸಿದವರು. ಜೆಡಿಎಸ್ ಪಕ್ಷಕ್ಕೆ ಕೈಕೊಟ್ಟಿರುವ ಅವರನ್ನು ಕಾಂಗ್ರೆಸ್ ಸೇರಲು ಅವಕಾಶ ನೀಡಿ ಟಿಕೆಟ್ ಕೊಡಲಾಗುತ್ತಿದೆ ಎಂದು ಟೀಕಿಸಿದರು. ‘ವರಿಷ್ಠರು ಪಕ್ಕಕ್ಕೆ ಸರಿಸುವ ಕೆಲಸ ಮಾಡುತ್ತಿರುವಾಗ ನಾನು ಸಹಿಸಿಕೊಂಡು ಹೇಗೆ ಇರಲಿ’ ಎಂದರು.
ಜೆಡಿಎಸ್ನಿಂದ ಟಿಕೆಟ್ ಕೊಡುವುದಾಗಿ ಎಚ್.ಡಿ.ದೇವೇಗೌಡರು ಭರವಸೆ ನೀಡಿದ್ದಾರೆ. ಅದರಂತೆ ಸ್ವಾಭಿಮಾನಿ ಸಮಾವೇಶ ನಡೆಸಲಾಗುತ್ತಿದೆ ಎಂದರು. ಬಾಲಕೃಷ್ಣರ ಬೆದರಿಕೆಗೆ ಬಗ್ಗುವುದಿಲ್ಲ. ಕಾರ್ಯಕರ್ತರಿಗಾಗಿ ರಕ್ತವನ್ನು ಕೊಡುವೆ ಕೊನೆಗೆ ಪ್ರಾಣಾರ್ಪನೆ ಮಾಡಲು ಸಿದ್ಧ ಎಂದು ತಿಳಿಸಿದರು.
ಹಿರಿಯರಾದ ಹುಚ್ಚಹನುಮೇಗೌಡನ ಪಾಳ್ಯದ ಕೆಂಪೇಗೌಡ ಮಾತನಾಡಿ ಎಚ್.ಎಂ.ರೇವಣ್ಣನನ್ನು ಕ್ಷೇತ್ರ ಬಿಟ್ಟು ಓಡುವಂತೆ ಮಾಡಿರುವೆ ಎಂದು ಬಹಿರಂಗ ವೇದಿಕೆಯಲ್ಲಿ ಮಾತನಾಡಿದ್ದ ಶಾಸಕ, ಈಗ ರೇವಣ್ಣ ಸಚಿವರಾದ ಮೇಲೆ ಅವರಿಗೆ ಹೂವಿನಹಾರ ಹಾಕಿ ‘ನನಗೆ ಪಕ್ಷದಲ್ಲಿ ಸಹಕಾರ ನೀಡಿ ಎಂದು ಕೇಳಿಕೊಳ್ಳುತ್ತಾರೆ. ಇದೆಂತಹ ರಾಜಕಾರಣ’ ಎಂದು ಪ್ರಶ್ನಿಸಿದರು.
ಪೂಜಾರಿಪಾಳ್ಯ ಕೃಷ್ಣಮೂರ್ತಿ, ಬಗಿನಿಗೆರೆಯ ವಾಟರ್ ಬೋರ್ಡ್ ರಾಮಣ್ಣ, ಕಲ್ಕೆರೆ ಶಿವಣ್ಣ ಮಾತನಾಡಿದರು ಅಯ್ಯಂಡಹಳ್ಳಿ ರಂಗಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ಕಲ್ಕೆರೆ ಉಮೇಶ್, ರಮೇಶ್, ವೇಣು, ಕೃಷ್ಣಪ್ಪ, ಶ್ರೀಧರ್, ಆರೀಫ್, ಬಾಳೇಗೌಡ, ನರಸಿಂಹಮೂರ್ತಿ, ನಟರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.