ದಾವಣಗೆರೆ: ನಗರದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗಿದ್ದು, ಕೂಡಲೇ ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿಸಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ‘ಕಾಡಾ’ ಅಧ್ಯಕ್ಷ ಸುಂದರೇಶ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸೂಚಿಸಿದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಗೃಹ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಾಲಿಕೆ ಸಹಾಯಕ ಎಂಜಿನೀಯರ್ ಕೆ.ಎಂ.ಮಂಜುನಾಥ್ ಅವರು, ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ಟಿವಿ ಸ್ಟೇಷನ್ ಕೆರೆಯಲ್ಲಿ ನೀರು ಇಲ್ಲ’ ಎಂದು ಶಾಸಕರ ಗಮನಕ್ಕೆ ತಂದರು.
ಶಾಸಕರ ಪೋನ್ ಕರೆಗೆ ಪ್ರತಿಕ್ರಿಯಿಸಿದ ಸುಂದರೇಶ್ ಅವರು, ‘ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ನಾಲೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.
ನಗರಕ್ಕೆ ನಿತ್ಯ 81 ಎಂಎಲ್ಡಿ ನೀರು ಅವಶ್ಯವಿದೆ. ಇದುವರೆಗೆ 2ನೇ ಹಂತದ ನಿರು ಸರಬರಾಜು ಕೇಂದ್ರದಿಂದ 36 ಎಂಎಲ್ಡಿ., ಕುಂದುವಾಡ ಕೆರೆಯಿಂದ 18 ಎಂಎಲ್ಡಿ., ಟಿವಿ ಸ್ಟೇಷನ್ ಪಂಪ್ಹೌಸ್ನಿಂದ 18 ಎಂಎಲ್ಡಿ., ಒಟ್ಟು 72 ಎಂಎಲ್ಡಿ ನೀರನ್ನು ವಾರಕ್ಕೆ 2 ಬಾರಿಯಂತೆ ಸರಬರಾಜು ಮಾಡಲಾಗಿದೆ ಎಂದು ಮಂಜುನಾಥ ಮಾಹಿತಿ ನೀಡಿದರು.
ಭದ್ರಾ ಜಲಾಶಯದಿಂದ ನಾಲೆಗೆ ನೀರನ್ನು ಹರಿಸದ ಪ್ರಯುಕ್ತ ಟಿ.ವಿ. ಸ್ಟೇಷನ್ ಕೆರೆ ಸಂಪೂರ್ಣವಾಗಿ ಖಾಲಿಯಾಗಿ 18 ಎಂಎಲ್ಡಿ ನೀರು ಸ್ಥಗಿತಗೊಂಡಿದೆ ಎಂದು ಹೇಳಿದರು.
ಭದ್ರಾ ಜಲಾಶಯದಲ್ಲಿ 165.3 ಅಡಿ ನೀರು ಸಂಗ್ರಹವಾಗಿದ್ದು, ನಾಲೆಗಳಿಗೆ ಡಿಸೆಂಬರ್ ಅಂತ್ಯದವರೆಗೆ ನೀರು ಹರಿಸುವ ಸಾಧ್ಯತೆ ಇಲ್ಲದೇ ಇರುವುದರಿಂದ ತಾತ್ಕಲಿಕ ವ್ಯವಸ್ಥೆ ಮಾಡಿದ್ದಲ್ಲಿ ಮೊದಲಿನ ಹಾಗೆ ವಾರಕ್ಕೆ 2 ದಿನ ನೀರು ಸರಬರಾಜು ಮಾಡಬಹುದು ಎಂದರು.
ಸೆಪ್ಟೆಂಬರ್ನಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವುದರಿಂದ 2ನೇ ಹಂತ ನೀರು ಸರಬರಾಜು ಕೇಂದ್ರದ ಬಾತಿ ಮತ್ತು ರಾಜನಹಳ್ಳಿ ನೀರು ಸರಬರಾಜು ಕೇಂದ್ರಗಳಿಗೆ ಸಮಪರ್ಕವಾಗಿ ವಿದ್ಯುತ್ ಪೂರೈಕೆ ಸಮಸ್ಯೆ ಉಂಟಾಗಬಹುದು ಎಂದು ಬೆಸ್ಕಾಂ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.
ಕುಡಿಯುವ ನೀರು ಹಾಗೂ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜೊತೆಗೆ ಕುಂದವಾಡ ಕೆರೆಗೆ ನೀರು ಸರಬರಾಜು ಮಾಡಲು ರಾಜನಹಳ್ಳಿ ಜಾಕ್ವೆಲ್ ಪಂಪ್ಹೌಸ್ ಮತ್ತು ಬಾತಿ ಶುದ್ಧ ಕುಡಿಯುವ ನೀರಿನ ಜಲಗಾರ ಕೇಂದ್ರದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಕೂಡಲೇ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಉಪ ಮೇಯರ್ ಮಂಜಮ್ಮ ಹನುಮಂತಪ್ಪ, ಪಾಲಿಕೆ ಸದಸ್ಯರಾದ ದಿನೇಶ್ ಕೆ.ಶೆಟ್ಟಿ, ಎ.ನಾಗರಾಜ್, ಎಂಜಿನೀಯರ್ ಎಂ.ಸತೀಶ್, ಜಿ.ಭೀಮಾನಾಯ್ಕ, ಕೆ.ಎನ್.ತೀರ್ಥೇಶ್, ಲೋಹಿತ್ ಕುಮಾರ್, ಆರ್.ಚಂದ್ರಶೇಖರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.