ಹೊನ್ನಾಳಿ: ಪಕ್ಷದ ಬಲವರ್ಧನೆಗಾಗಿ ತಾಲ್ಲೂಕಿನಾದ್ಯಂತ ಪ್ರವಾಸ ಕೈಗೊಂಡಿದ್ದು, ಇದೀಗ ಪಟ್ಟಣದಲ್ಲಿಯೂ ಪಕ್ಷದ ಮುಖಂಡರು, ಮತ್ತು ಕಾರ್ಯಕರ್ತರೊಂದಿಗೆ ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದು ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಮಂಗಳವಾರ ಪಟ್ಟಣದ ಬಸವೇಶ್ವರ ಸಭಾ ಭವನದಲ್ಲಿ ವಾರ್ಡ್ ಸಂಖ್ಯೆ 2, ಬೂತ್ ಸಂಖ್ಯೆ 97 ರಲ್ಲಿನ ಬೂತ್ ಕಮಿಟಿಯ ಅಧ್ಯಕ್ಷರು ಮತ್ತು ಸದಸ್ಯರುಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
227 ಬೂತ್ ರಚನೆ: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ತಾಲ್ಲೂಕಿನಾದ್ಯಂತ ಪ್ರವಾಸ ಮಾಡಿ 227 ಬೂತ್ ಗಳನ್ನು ರಚಿಸಿದ್ದೇನೆ. ಎರಡನೇ ಹಂತದ ಬೂತ್ ಕಮಿಟಿ ರಚನೆಗೆ ಪಟ್ಟಣದಲ್ಲಿ ಪ್ರವಾಸ ಕೈಗೊಂಡಿದ್ದೇನೆ ಎಂದರು.
ವಾರ್ಡ್ ನಂ 2 ರಲ್ಲಿ ಬೂತ್ ಕಮಿಟಿ ಅಧ್ಯಕ್ಷರಾಗಿ ದಲಿತ ಮುಖಂಡ ನಾಗರಾಜ್ ಅವರನ್ನು ನೇಮಿಸಲಾಗಿದೆ. ಪಕ್ಷದ ಸೂಚನೆಯಂತೆ ಪ್ರತಿ ಬೂತ್ ಸಮಿತಿಯ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜವನ್ನು ಆರೋಹಣ ಮಾಡಲಾಗಿದೆ ಎಂದರು.
ಸುಳ್ಳು ಪ್ರಚಾರ: ಶಾಸಕ ಡಿ.ಜಿ. ಶಾಂತನಗೌಡ ಅವರು ಸುಳ್ಳು ಪ್ರಚಾರ ಮಾಡುವ ಮೂಲಕ ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ. ತಾಲ್ಲೂಕಿನ ಕುಂಕುವಾ ಕೆರೆ ಅಭಿವೃದ್ಧಿಗೆ ಚಂದ್ರಾನಾಯ್ಕ ಮತ್ತು ಗ್ರಾಮಸ್ಥರು ಸೇರಿಕೊಂಡು ₹ 15 ಲಕ್ಷ ಸಂಗ್ರಹಿಸಿ ಕೆರೆ ಅಭಿವೃದ್ಧಿಪಡಿಸಿದ್ದಾರೆ.
ಆದರೆ ಶಾಸಕರು ಈ ಕೆರೆ ಅಭಿವೃದ್ಧಿಯನ್ನು ತಾವೇ ಮಾಡಿಸಿದ್ದು ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ. ಅದೇ ರೀತಿಯಲ್ಲಿ ಸೊರಟೂರು ಗ್ರಾ.ಪಂ. ಕಟ್ಟಡಕ್ಕೆ ಗ್ರಾ.ಪಂ.ಯಿಂದ ₹ 18 ಲಕ್ಷ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಆದರೆ ನಾನೇ ಅನುದಾನ ಬಿಡುಗಡೆ ಮಾಡಿಸಿದ್ದೇನೆ ಎಂದು ಹೇಳಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಕುಬೇರಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಭು, ಬೂತ್ ಸಮಿತಿ ಅಧ್ಯಕ್ಷ ನಾಗರಾಜ್, ಪದಾಧಿಕಾರಿಗಳಾದ ಶೀಲಮ್ಮ, ಗೌರಮ್ಮ, ಮಂಡಕ್ಕಿಕೇರಿ ಬೂತ್ ಸಮಿತಿ ಉಪಾಧ್ಯಕ್ಷ ನಜೀರುಲ್ಲಾ, ಮುಖಂಡ ಮೂಲಿ ನಾಗರಾಜ್, ಗಾಳಿ ಕುಮಾರ್ ಹಾಜರಿದ್ದರು.