ನವದೆಹಲಿ: ‘ದೇಶದಲ್ಲಿ ಸಕ್ಕರೆ ಕೊರತೆ ಇಲ್ಲ. ಹೀಗಾಗಿ ಈ ಬಾರಿ ಹಬ್ಬದ ಸಂದರ್ಭದಲ್ಲಿ ಚಿಲ್ಲರೆ ಮಾರಾಟ ದರದಲ್ಲಿ ಏರಿಕೆ ಆಗುವುದಿಲ್ಲ’ ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಭರವಸೆ ನೀಡಿದ್ದಾರೆ.
‘ಅತಿ ಹೆಚ್ಚು ಸಕ್ಕರೆ ಉತ್ಪಾದನೆ ಆಗುವ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಸಕ್ಕರೆ ಕೊರತೆ ಇಲ್ಲ. ಹಬ್ಬದ ಸಂದರ್ಭದಲ್ಲಿ ಸಕ್ಕರೆ ಬೆಲೆ ಹೆಚ್ಚಾಗುವುದಕ್ಕೆ ಬಿಡುವುದಿಲ್ಲ. ಬೆಲೆ ಸ್ಥಿರವಾಗಿರಲಿದೆ ಎನ್ನುವ ಭರವಸೆ ನೀಡುತ್ತೇವೆ’ ಎಂದು ಅವರು ಹೇಳಿದ್ದಾರೆ.
ಸದ್ಯ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹43 ರಂತೆ ಮಾರಾಟವಾಗುತ್ತಿದೆ. ಕಳೆದ ವರ್ಷ ಕೆ.ಜಿಗೆ ₹40 ರಷ್ಟಿತ್ತು ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.