ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ವಿಧಿಸಿದ್ದ ತಡೆಯಾಜ್ಞೆಯನ್ನು ಮುಂದಿನ ಆದೇಶದವರೆಗೆ ಮದ್ರಾಸ್ ಹೈಕೋರ್ಟ್ ವಿಸ್ತರಿಸಿದೆ.
ವಿಧಾನಸಭೆ ಸ್ಪೀಕರ್ ಪಿ. ಧನಪಾಲ್ ಅವರು ಎಐಎಡಿಎಂಕೆಯ ದಿನಕರನ್ ಬಣದ 18 ಶಾಸಕರನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ದೊರೈಸ್ವಾಮಿ ಅವರು ನಡಸಿದರು. ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಿರ್ಧಾರಕ್ಕೆ ಅವರು ತಡೆ ನೀಡಿಲ್ಲ.
ಶಾಸಕರ ಅನರ್ಹತೆಯಿಂದಾಗಿ 18 ಕ್ಷೇತ್ರಗಳು ಖಾಲಿ ಇವೆ ಎಂದು ಪರಿಗಣಿಸಿ ಉಪ ಚುನಾವಣೆಗೆ ಅಧಿಸೂಚನೆ ಹೊರಡಿಸಬಾರದು ಎಂದೂ ನ್ಯಾಯಮೂರ್ತಿ ನಿರ್ದೇಶನ ನೀಡಿದ್ದಾರೆ.
ಅನರ್ಹಗೊಂಡ 18 ಶಾಸಕರ ಪೈಕಿ ಎಂಟು ಶಾಸಕರು ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇಂತಹ
ನಿರ್ಧಾರ ಕೈಗೊಳ್ಳುವ ಹಕ್ಕು ಸ್ಪೀಕರ್ಗೆ ಇಲ್ಲ ಮತ್ತು ಅವರು ಕೈಗೊಂಡಿರುವ ನಿರ್ಧಾರ ‘ಕಾನೂನುಬಾಹಿರ’ ಎಂದು ಈ ಶಾಸಕರು ವಾದಿಸಿದ್ದಾರೆ. ಸ್ಪೀಕರ್, ಸರ್ಕಾರದ ಮುಖ್ಯ
ಸಚೇತಕ ಎಸ್. ರಾಜೇಂದ್ರನ್, ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ವಿಧಾನಸಭೆ ಕಾರ್ಯದರ್ಶಿಯವರು ಜನಪ್ರತಿನಿಧಿಗಳಾಗಿ ತಮಗೆ ಇರುವ ಹಕ್ಕುಗಳಲ್ಲಿ ಮಧ್ಯಪ್ರವೇಶ ನಡೆಸಬಾರದು ಎಂದೂ ಈ ಎಂಟು ಶಾಸಕರು ಕೋರಿದ್ದಾರೆ.
ಬುಧವಾರದವರೆಗೆ (ಸೆ. 20) ವಿಶ್ವಾಸಮತ ಯಾಚನೆ ನಡೆಸಬಾರದು ಎಂದು ಸೆ. 14ರಂದು ನ್ಯಾಯಮೂರ್ತಿ ಆದೇಶ ನೀಡಿದ್ದರು.