ಚೇಳೂರು: ಗ್ರಾಮದ ಚರಂಡಿಗಳ ತುಂಬಿ ತುಳುಕುತ್ತಿದ್ದು ಸೊಳ್ಳೆಗಳ ಆವಾಸ ತಾಣವಾಗಿವೆ. ಸಾಂಕ್ರಾಮಿಕ ರೋಗಗಳ ಕಾರಣ ಜನರು ಆಸ್ಪತ್ರೆಗಳತ್ತ ಎಡತಾಕುತ್ತಿದ್ದಾರೆ. ಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಕಸ ಕಡ್ಡಿಗಳು ತುಂಬಿರುವುದು ಎದ್ದು ಕಾಣುತ್ತದೆ.
ಅಲ್ಲದೆ ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ, ತಿಪ್ಪೆಗುಂಡಿಗಳು ಇದ್ದು ಅನೈರ್ಮಲ್ಯ ತೀವ್ರವಾಗಿದೆ. ಕಸದ ರಾಶಿ ಮನೆಗಳ ಬಳಿಯೇ ಇದ್ದು ವಿಷ ಜಂತುಗಳು ಮನೆಗೆ ನುಗ್ಗುವ ಆತಂಕ ಜನರಲ್ಲಿ ಇದೆ. ಸಮಸ್ಯೆ ಪರಿಹರಿಸುವಂತೆ ಪಂಚಾಯಿತಿ ಅಧಿಕಾರಿಗಳಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರುವರು.
ಡೆಂಗಿ, ಮಲೇರಿಯಾ, ಚಿಕೂನ್ ಗುನ್ಯಾ ಕಾಯಿಲೆ ಗ್ರಾಮದ ನೂರಾರು ಜನರು ತುತ್ತಾಗಿದ್ದಾರೆ. ಆದರೆ ಇಲ್ಲಿಯವರೆಗೂ ಫಾಗಿಂಗ್ ಮಾತ್ರ ಮಾಡಿಲ್ಲ. ಚರಂಡಿ ಸ್ವಚ್ಛತೆಗೆ ಎರಡು ವರ್ಷಗಳ ಹಿಂದೆ ಕೀಟ ನಾಶಕಗಳನ್ನು ತರಲಾಗಿತ್ತು. ಆದರೆ ಇವು ಬಳಕೆಯಾಗದೆ ಪಂಚಾಯಿತಿ ಕಚೇರಿಯ ಮೂಲೆಯಲ್ಲಿ ಬಿದ್ದಿವೆ.