ಬೆಂಗಳೂರು: ತಮ್ಮ ಕಂಪೆನಿ ಜೆ. ಎಚ್. ಪಟೇಲ್ ಹೋಟೆಲ್ಸ್ ಇಂಡಿಯಾದಲ್ಲಿ ತಾವು ಯಾವುದೇ ತೆರಿಗೆ ತಪ್ಪಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಎಚ್. ಪಟೇಲ್ ಅವರ ಮಗ ಮಹಿಮ ಪಟೇಲ್ ಸ್ಪಷ್ಟಪಡಿಸಿದ್ದಾರೆ.
‘ಕಂಪೆನಿ ಅಸ್ತಿತ್ವಕ್ಕೆ ಬಂದ ದಿನದಿಂದ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಸದ ಮತ್ತು ವಾರ್ಷಿಕ ಲೆಕ್ಕಪತ್ರ ಸಲ್ಲಿಸದ ಕಾರಣಕ್ಕೆ ತಮ್ಮ ಸಂಸ್ಥೆಯು ಯಾವುದೇ ಪಾಪ ಕೃತ್ಯ ಎಸಗಿಲ್ಲ’ ಎಂದು ಅವರು ಹೇಳಿದ್ದಾರೆ. ಆದರೆ, ಸಂಸ್ಥೆಯಲ್ಲಿ ಯಾವುದೇ ವಹಿವಾಟು ನಡೆಯದಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ.
‘ನಾನು ಈ ಕಂಪೆನಿಯ ನಿರ್ದೇಶಕನಾಗಿದ್ದುಕೊಂಡು, ವಾರ್ಷಿಕ ಲೆಕ್ಕಪತ್ರ ಸಲ್ಲಿಸದಿರುವಲ್ಲಿ ನನ್ನಿಂದ ತಪ್ಪಾಗಿದೆ. ಆದರೆ, ನಾನು ಯಾವುದೇ ತೆರಿಗೆ ತಪ್ಪಿಸಿಲ್ಲ. ಕಂಪೆನಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿರುವುದೂ ನನಗೆ ಗೊತ್ತಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಆದಾಯ ತೆರಿಗೆ ಇಲಾಖೆಯು ಆರು ತಿಂಗಳ ಹಿಂದೆ ನನಗೆ ನೋಟಿಸ್ ಕಳಿಸಿತ್ತು. ಅದಕ್ಕೆ ನಾನು ಸೂಕ್ತ ರೀತಿಯಲ್ಲಿ ಉತ್ತರಿಸಿರುವೆ. ಕಂಪೆನಿ ಮುಚ್ಚಲು ಸಂಸ್ಥೆಯ ಕಾರ್ಯದರ್ಶಿಗೆ ಸೂಚಿಸಿರುವೆ’ ಎಂದು ಪಟೇಲ್ ತಿಳಿಸಿದ್ದಾರೆ.