ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಜಮೀನಿನ ಅಕ್ರಮ ಡಿನೋಟಿಫಿಕೇಷನ್ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಗಳ ಮೇಲಿನ ಆದೇಶದ ಉಕ್ತಲೇಖನವನ್ನು (dictation) ಹೈಕೋರ್ಟ್ ಶುಕ್ರವಾರವೂ ಮುಂದುವರಿಸಲಿದೆ.
ಈ ಕುರಿತಂತೆ ಗುರುವಾರ ಇಡೀ ದಿನ ತೆರೆದ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಉಕ್ತಲೇಖನ ನೀಡಿತು. ಆದೇಶ ಪೂರ್ಣಗೊಳ್ಳದ ಕಾರಣ ಶುಕ್ರವಾರಕ್ಕೆ ಮುಂದೂಡಿತು.
‘ಶಿವರಾಮ ಕಾರಂತ ಬಡಾವಣೆಯಲ್ಲಿ 257 ಎಕರೆ ಜಮೀನಿನ ಅಕ್ರಮ ಡಿನೋಟಿಫೀಕೇಷನ್ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ದಾಖಲಿಸಿರುವ ಎಫ್ಐಆರ್ ರದ್ದುಪಡಿಸಿ’ ಎಂದು ಕೋರಿ ಯಡಿಯೂರಪ್ಪ ಈ ಅರ್ಜಿ ಸಲ್ಲಿಸಿದ್ದಾರೆ.