ಕೊರಟಗೆರೆ: `ಸಾಮಾನ್ಯ ಜನರು ಸರ್ಕಾರ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು' ಎಂದು ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಎಲ್.ಪಿ.ಜಿ.ಗ್ಯಾಸ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
`ಗ್ರಾಮೀಣ ಭಾಗದ ಜನರಿಗೆ ಸರ್ಕಾರ ಉಚಿತ ಗ್ಯಾಸ್ ಸೌಲಭ್ಯ ಒದಗಿಸುತ್ತಿದ್ದು. ಇದನ್ನು ಎಚ್ಚರಿಕೆಯಿಂದ ಬಳಸಿ ಅಪಾಯದ ಸನ್ನಿವೇಶದಲ್ಲಿ ನಿರ್ಲಕ್ಷ್ಯ ತೋರದಿರಿ' ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ‘ಕೇಂದ್ರ ಸರ್ಕಾರ ಬಡಜನರಿಗೆ ಉಪಯೋಗವಾಗಲು ಹಲವು ಯೋಜನೆ ಒದಗಿಸುತ್ತಿದ್ದು ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡಬೇಕು’ ಎಂದರು.
ಅಕ್ಕಿರಾಂಪುರದ ವರುಣ್ ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕ ಕಿಶೋರ್ ಮಾತನಾಡಿ, ‘ತಾಲ್ಲೂಕಿನಲ್ಲಿ ಈಗಾಗಲೇ ಉಚಿತವಾಗಿ 1500 ಗ್ಯಾಸ್ ಸೌಲಭ್ಯ ಒದಗಿಸಲಾಗಿದೆ' ಎಂದರು.