ಮುಧೋಳ: ‘ವಿಜಯ ಅನಾಥಾಶ್ರಮದಲ್ಲಿರುವ 27 ಅನಾಥ ಮಕ್ಕಳ ನಿತ್ಯ ಊಟದ ವ್ಯವಸ್ಥೆಯನ್ನು ಮುತ್ಯಾನ ಮುಗಳಖೋಡದಿಂದ ಮಾಡಲಾಗುವುದು’ ಎಂದು ಮುತ್ಯಾನ ಮುಗಳಖೋಡದ ಮುರುಘ ರಾಘವೇಂದ್ರ ಸ್ವಾಮೀಜಿ ಹೇಳಿದರು.
ನಗರದ ಸಮೀಪದ ಬಳ್ಳೂರ ಪುನರ್ವಸತಿ ಕೇಂದ್ರದಲ್ಲಿರುವ ವಿಜಯ ಅನಾಥಾಶ್ರಮದಲ್ಲಿ ಮುಗಳಖೋಡದ ಶ್ರೀ ಷಡಕ್ಷರಿ ಶಿವಯೋಗಿ ಸಿದ್ದರಾಮೇಶ್ವರ ಶ್ರೀಗಳ 89ನೇ ಜಯಂತ್ಯುತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ತಂದೆ-ತಾಯಿ ಕಳೆದುಕೊಂಡ ಬಾಲಕನೊಬ್ಬ ತನ್ನ ಬವಣೆ ಇನ್ನೊಬ್ಬರಿಗೆ ಬರಬಾರದೆಂದು ಆಲೋಚಿಸಿದಾಗ ಅದನ್ನು ಕಾರ್ಯರೂಪಕ್ಕೆ ತಂದ ಕಲ್ಮೇಶ ಗೋಸಾರ ಹಾಗೂ ಅವರ ತಂಡ ಈ ಅನಾಥಶ್ರಾಮ ನಿರ್ಮಿಸಿತು. ಇಲ್ಲಿ 27 ಜನ ಅನಾಥ ಮಕ್ಕಳು ಇದ್ದು, ಇವರ ಯೋಗಕ್ಷೇಮ ನೋಡಿಕೊಳ್ಳುತ್ತಿರುವ ಇವರ ತಂಡದ ಕಾರ್ಯ ಶ್ಲಾಘನೀಯ. ಸರ್ಕಾರದಿಂದ ಯಾವುದೇ ಸಹಾಯವಿಲ್ಲದೇ ಇವರು ಕಾರ್ಯ ನಿರ್ವಹಿಸುತ್ತಿರುವುದು ಮೆಚ್ಚುವಂಥ ವಿಷಯ’ ಎಂದು ಶ್ಲಾಘಿಸಿದರು.
ಬದಾಮಿ ಗುರುಗಳು ಮಾತನಾಡಿ, ವಿಜಯ ಅನಾಥಾಶ್ರಮದ ಸ್ಥಾಪನೆ, ಅಲ್ಲಿ ಕೈಗೊಂಡ ಕಾರ್ಯಗಳು, ಶಿಕ್ಷಕರ ಹಾಗೂ ಅನೇಕ ಮೇಧಾವಿಗಳು ಮಕ್ಕಳ ಬಗ್ಗೆ ಕೈಗೊಂಡ ವಿಶೇಷ ಕಾರ್ಯಕ್ರಮಗಳ ವಿವರ ನೀಡಿದರು.
ಆಡಳಿತ ಮಂಡಳಿಯ ರಘುನಾಥ ಮೋಕಾಶಿ, ಸೋಮಶೇಖರ ಗೋಸಾರ, ಸಂತೋಷ ನಿಂಬಾಳಕರ, ಮುತ್ತಯ್ಯ ಮಠ, ಭೀಮ ಕುಮಕಾಲೆ, ಸಂತೋಷ ಘೋರ್ಪಡೆ, ಮಹಾದೇವ ಗಣಿ, ಲಕ್ಷ್ಮಣ ಮಾದರ, ಚಿದಾನಂದ ಅಕ್ಕಿ, ಯುವರಾಜ ನಿಂಬಾಳಕರ, ದೀಪಕ ಓಸ್ವಾಲ, ರಾಮಚಂದ್ರ ಕದಂ ಇದ್ದರು.
ಮುತ್ತು ಮಠ ಸ್ವಾಗತಿಸಿ, ನಿರೂಪಿಸಿದರು. ವಿಜಯ ಅನಾಥಾಶ್ರಮದ ಅಧ್ಯಕ್ಷ ಕಲ್ಮೇಶ ಗೋಸಾರ ವಂದಿಸಿದರು.