ಹೊಸನಗರ (ಶಿವಮೊಗ್ಗ ಜಿಲ್ಲೆ): ಬಿಲ್ಲೋಡಿ ಗ್ರಾಮದ ಈಶ್ವರ ನಾಯ್ಕ ಹಾಗೂ ಜೋಬಿ ಎಂಬುವವರ ಮನೆಯಲ್ಲಿ ಗೋವುಗಳನ್ನು ಅಕ್ರಮವಾಗಿ ಹತ್ಯೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಶನಿವಾರ ತಡರಾತ್ರಿ ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸಿದ ಆರೋಪದಡಿ ವಸಿಷ್ಠ, ಅಭಿಲಾಷ, ರಾಘವೇಂದ್ರ, ಪ್ರಭಾಕರ, ಕಿರಣಕುಮಾರ್, ಜಗದೀಶ ಎಂಬುವವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅಕ್ರಮವಾಗಿ ಗೋ ಹತ್ಯೆ ಮಾಡಿದ ಈಶ್ವರ ನಾಯ್ಕ ಹಾಗೂ ಜೋಬಿ ಮೇಲೂ ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿ ವಿರುದ್ಧ ಪತ್ನಿ ದೂರು: ತಮ್ಮ ಪತಿ ಗೋವುಗಳನ್ನು ಅಕ್ರಮವಾಗಿ ತಂದು, ಹತ್ಯೆ ಮಾಡಿ, ಮಾಂಸ ಮಾರುವವರಿಗೆ ಸಹಕರಿಸುತ್ತಿದ್ದಾರೆ. ಇದರಿಂದ ಗ್ರಾಮದ ಶಾಂತಿಗೆ ಭಂಗವಾಗುತ್ತಿದೆ ಎಂದು ಈಶ್ವರ ನಾಯ್ಕನ ಪತ್ನಿ ಶಾರದಮ್ಮ ಪೊಲೀಸರಿಗೆ ದೂರು ನೀಡಿದರು.
ಪೊಲೀಸ್ ಠಾಣೆ ಎದುರು ಧರಣಿ: ಗೋ ರಕ್ಷಕ ರೈತರ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಗೋ ಹಂತಕರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರ ವಿರುದ್ಧ ಬಿಲ್ಲೋಡಿ ಗ್ರಾಮದ ಮಹಿಳೆಯರೂ ಸೇರಿದಂತೆ ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿವಣೆ ಸೀತಾರಾಮ ಭಟ್, ಕಾನೂನುಬಾಹಿರವಾಗಿ ಗೋವುಗಳ ಹತ್ಯೆ ಮಾಡುವವರನ್ನು ಸರ್ಕಾರ ರಕ್ಷಿಸುತ್ತಿದೆ ಎಂದು ದೂರಿದರು.