ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದ ಗಣಿತ, ಚೀನಿ ತಂತ್ರಜ್ಞಾನ ಯುರೋಪ್ ವಿಜ್ಞಾನದ ಕ್ರಾಂತಿಗೆ ಕಾರಣ’

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಗಣಿತ ಮತ್ತು ಚೀನಾದ ತಂತ್ರಜ್ಞಾನ ಯುರೋಪಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ರಾಂತಿಗೆ ಕಾರಣವಾಯಿತು ಎಂದು ಖ್ಯಾತ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ ಹೇಳಿದರು.

‘ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಥಿಯರೆಟಿಕಲ್‌ ಸೈನ್ಸಸ್‌’ (ಐಸಿಟಿಎಸ್‌) ಭಾನುವಾರ ಜವಾಹರಲಾಲ್‌ ನೆಹರೂ ತಾರಾಲಯದಲ್ಲಿ ಏರ್ಪಡಿಸಿದ್ದ ’ಭಾರತೀಯ ವಿಜ್ಞಾನದ ಅದ್ಭುತ ವಿಜಯ ಮತ್ತು ಕಟ್ಟು ಕಥೆ’ ವಿಷಯ ಕುರಿತು ಮಾತನಾಡಿದರು.

‘ಆಧುನಿಕ ಗಣಿತದ ಬೇರುಗಳು ಭಾರತದ್ದೇ ಆಗಿವೆ. 16 ಮತ್ತು 17 ನೇ ಶತಮಾನದಲ್ಲಿ ಯುರೋಪ್‌ನಲ್ಲಿ ನಡೆದ ವಿಜ್ಞಾನದ ಪವಾಡಗಳ ಮೂಲ ಏಷ್ಯಾದ್ದೇ ಆಗಿದೆ’ ಎಂದೂ ಅವರು ತಿಳಿಸಿದರು.

‘ವಿಜ್ಞಾನದಲ್ಲಿ ಇರುವುದೆಲ್ಲವೂ ಪ್ರಾಚೀನ ಭಾರತೀಯರಿಗೆ ಗೊತ್ತಿತ್ತು ಮತ್ತು ವಿಜ್ಞಾನದ ಯಾವುದೇ ಮೌಲ್ಯಗಳು ಭಾರತೀಯರಿಗೆ ಗೊತ್ತಿರಲಿಲ್ಲ ಎಂಬ ಅತಿರೇಕದ ಎರಡೂ ವಾದಗಳು ಅಪಾಯಕಾರಿ’ ಎಂದು ರೊದ್ದಂ ನರಸಿಂಹ ಎಚ್ಚರಿಸಿದರು.

‘ಕ್ರಿಸ್ತ ಪೂರ್ವದಲ್ಲಿ ಯರೋಪಿನಲ್ಲಿ ವಿಜ್ಞಾನ ಆರಂಭವಾಗಿತ್ತು. ಯುಕ್ಲಿಡ್‌, ಪೈಥಾಗೊರಸ್‌ ಆ ಕಾಲದಲ್ಲಿ ಇದ್ದವರು. ಆ ಬಳಿಕ 500 ವರ್ಷಗಳು ಅಲ್ಲಿ ಯಾವೊಬ್ಬ ಶ್ರೇಷ್ಠ ವಿಜ್ಞಾನಿ ಬರಲಿಲ್ಲ. ಆ ಅವಧಿಯನ್ನು ಕಪ್ಪು ಯುಗ ಅಥವಾ ಡಾರ್ಕ್‌ ಏಜ್‌ ಎಂದೇ ಗುರುತಿಸಲಾಗುತ್ತದೆ. ಆಗ ಭಾರತದಲ್ಲಿ ಸಾಕಷ್ಟು ಗಣಿತಜ್ಞರು, ವಿಜ್ಞಾನಿಗಳ ಜಗತ್ತಿಗೆ ಕೊಡುಗೆ ನೀಡಿದರು. ಬ್ರಹ್ಮಗುಪ್ತ, ಆರ್ಯಭಟ, ಭಾಸ್ಕರ, ಮಾಧವ ಇನ್ನು ಮೊದಲದವರನ್ನು ಹೆಸರಿಬಹುದು’ ಎಂದರು.

‘ವೈಮಾನಿಕ ಶಾಸ್ತ್ರ‘ ಮತ್ತು ‘ಬೃಹತ್‌ ವಿಮಾನ ಶಾಸ್ತ್ರ’ ಅನ್ವಯ ಭಾರತದಲ್ಲಿ ಪ್ರಾಚೀನ ಕಾಲದಲ್ಲಿ ವಿಮಾನಗಳು ಇದ್ದವು ಎಂಬುದು ಕಟ್ಟು ಕಥೆ. ವೈಮಾನಿಕ ಶಾಸ್ತ್ರ 100 ವರ್ಷಗಳಷ್ಟು ಹಳೆಯದು. ಅದರಲ್ಲಿ ವಿವರಿಸಿರುವ ‘ರುಕ್ಮ ವಿಮಾನ’ ಮತ್ತು ‘ಸುಂದರ ವಿಮಾನ’ ಎಂಬ ಎರಡು ಬಗೆಯ ವಿಮಾನಗಳ ತಯಾರಿಕೆ ವಿಧಾನಗಳನ್ನು ವಿವರಿಸಲಾಗಿದೆ. ಇದರ ಅನ್ವಯ ವಿಮಾನಗಳನ್ನು ತಯಾರಿಸಲು ಸಾಧ್ಯವೇ ಇಲ್ಲ. ಅದರಲ್ಲಿ ರೇಖಾ ಚಿತ್ರಗಳು ಕ್ಷಿಪಣಿಯನ್ನು ಹೋಲುತ್ತವೆ. ಆದ್ದರಿಂದ ಪ್ರಾಚೀನ ಕಾಲದಲ್ಲಿ ವಿಮಾನಗಳನ್ನು ತಯಾರಿಸುತ್ತಿದ್ದರು ಎಂಬುದು ನಿಜವಲ್ಲ ಎಂದು ರೊದ್ದಂ ತಿಳಿಸಿದರು.

ಪೈಥಾಗೊರಸ್‌ ಬುದ್ಧನ ಸಮಕಾಲೀನ. ಆದರೆ ಆ ಬಗ್ಗೆ ನಮ್ಮಲ್ಲಿ ಯಾರೂ ಬರೆದಿಲ್ಲ. ಬದಲಿಗೆ ಆತನೊಬ್ಬ ಚಮತ್ಕಾರಿ ವ್ಯಕ್ತಿ, ಭಾರತಕ್ಕೆ ಭೇಟಿ ಕೊಟ್ಟಿದ್ದ. ಅಪ್ಪಟ್ಟ ಸಸ್ಯಾಹಾರಿ ಎಂಬುದೂ ನಿಜವಲ್ಲ ಎಂದರು.

ಪ್ರಾಚೀನ ಭಾರತದಲ್ಲಿ ಪ್ಲಾಸ್ಟಿಕ್‌ ಸರ್ಜರಿ ನಡೆಯುತ್ತಿತ್ತು ಎಂಬುದು ನಿಜ. ಶುಶ್ರೂತ ಸಂಹಿತೆಗಳಲ್ಲಿ ಉಲ್ಲೇಖವಾಗಿರುವ ಮೂಗು ಸರಿಪಡಿಸುವ ಶಸ್ತ್ರಚಿಕಿತ್ಸೆಗೆ ಬಳಸುತ್ತಿದ್ದ ಸಲಕರಣೆಗಳ ಚಿತ್ರಗಳೂ ಲಭ್ಯವಿದೆ. ಇಂಗ್ಲೆಂಡಿನಲ್ಲಿ ಆ ಗ್ರಂಥ ಲಭ್ಯವಿದೆ.

1790 ರಲ್ಲಿ ಭಾರತದಲ್ಲಿ ನಡೆಯುತ್ತಿದ್ದ ಪ್ಲಾಸ್ಟಿಕ್‌ ಸರ್ಜರಿಗಳ ಬಗ್ಗೆ ಈಸ್ಟ್‌ ಇಂಡಿಯಾ ಕಂಪೆನಿ ಅಧಿಕಾರಿಗಳು, ಬ್ರಿಟನ್‌ಗೆ ವರದಿ ಮಾಡಿದ್ದರು. ಅದನ್ನು ಖಚಿತಪಡಿಸಿಕೊಳ್ಳಲು ಅಲ್ಲಿನ ವೈದ್ಯರುಗಳ ತಂಡ ಭಾರತಕ್ಕೆ ಬಂದಿತ್ತು.

ಟಿಪ್ಪು– ಮರಾಠ ಯುದ್ಧದಲ್ಲಿ ಮೂಗು ಕತ್ತರಿಸಿಕೊಂಡ ಎಷ್ಟೋ ಜನರಿಗೆ ಪುಣೆಯ ಸಮೀಪ ಪ್ಲಾಸ್ಟಿಕ್‌ ಸರ್ಜರಿ ಯಶಸ್ವಿಯಾಗಿ ನಡೆಸಿದ ವಿಷಯವನ್ನು ಬ್ರಿಟಿಷ್‌ ಪತ್ರಿಕೆಗಳು ಚಿತ್ರ ಸಮೇತ ವರದಿ ಪ್ರಕಟ ಮಾಡಿದ್ದವು. ಬ್ರಿಟನ್‌ನ ರಾಯಲ್ ಸೊಸೈಟಿಯಲ್ಲಿ ಅವುಗಳನ್ನು ನೋಡಿದ್ದೇನೆ ಎಂದು ಅವರು ಹೇಳಿದರು.

*
ಪ್ರಾಚೀನ ಭಾರತದಲ್ಲಿ ನಡೆದಿದ್ದ ವಿಜ್ಞಾನ ಮತ್ತು ಗಣಿತದ ಪ್ರಯೋಗಗಳ ಬಗ್ಗೆ ಹೇಳಿಕೊಳ್ಳಲು ಮುಜುಗರ ಬೇಕಿಲ್ಲ.
–ರೊದ್ದಂ ನರಸಿಂಹ, ಖ್ಯಾತ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT