ಚನ್ನಪಟ್ಟಣ: ತಾಲ್ಲೂಕಿನ ಎರಡನೇ ಅತಿದೊಡ್ಡ ಕೆರೆ ಬಂಡೂರು ಕೆರೆ ಸತತ ಮಳೆಯಿಂದಾಗಿ ಭರ್ತಿಯಾಗಿ ಕೋಡಿ ಹರಿದಿದೆ. ಕಳೆದ ವರ್ಷವೂ ಮಳೆ ಹಾಗೂ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಭರ್ತಿಯಾಗಿದ್ದ ಕೆರೆ ಈ ವರ್ಷ ಮಳೆಯಿಂದಲೇ ಕೋಡಿ ಹರಿದಿರುವುದು ಈ ಭಾಗದ ರೈತರಲ್ಲಿ ಸಂತಸ ತಂದಿದೆ.
2004ರಲ್ಲಿ ಭರ್ತಿಯಾಗಿ ಕೋಡಿ ಹರಿದಿದ್ದ ಈ ಕೆರೆ ಆನಂತರ ಕಳೆದ ವರ್ಷ ಭರ್ತಿಯಾಗಿತ್ತು. ಈ ಕೆರೆಯನ್ನು ಜನ ಜಾನುವಾರುಗಳಲ್ಲದೆ, ಕಾಡಿನ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಸೆಲೆಯಾಗಿದೆ. ಈ ವರ್ಷವೂ ಕೋಡಿ ಹರಿದಿರುವುದರಿಂದ ಪ್ರಾಣಿ ಪಕ್ಷಿಗಳಿಗೂ ಜೀವ ಬಂದಂತಾಗಿದೆ.
ಈ ಕೆರೆಯನ್ನು ನಂಬಿ ಬಿ.ವಿ.ಹಳ್ಳಿ, ವಿರುಪಾಕ್ಷಿಪುರ, ಸಿದ್ದೇಗೌಡನದೊಡ್ಡಿ, ಅಮ್ಮಳ್ಳಿದೊಡ್ಡಿ ಸೇರಿದಂತೆ ಹತ್ತಾರು ಗ್ರಾಮಗಳ ರೈತರು ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ. ಈಗ ರೈತರ ಮುಖದಲ್ಲಿ ಸಂತಸ ಮನೆ ಮಾಡಿದೆ.
ಕೆರೆಗಳು ಭರ್ತಿ: ತಾಲ್ಲೂಕಿನ ಮೆಣಸಿಗನಹಳ್ಳಿ, ಅರಳಾಳುಸಂದ್ರ, ಸಂಕಲಗೆರೆ, ಬೈರಾಪಟ್ಟಣ, ಗರಕಹಳ್ಳಿ, ಕರಷ್ಣಾಪುರ ಕೆರೆಗಳು ಸತತ ಮಳೆಯಿಂದಾಗಿ ಭರ್ತಿಯಾಗಿ ಕೋಡಿ ಹರಿದಿವೆ.
ಈ ಭಾಗದ ರೈತರು ಕೆರೆಗಳ ಕೋಡಿಯಿಂದಾಗಿ ಹರ್ಷಚಿತ್ತರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಭರ್ತಿಯಾಗದಿದ್ದ ಕೆರೆಗಳು ಈ ವರ್ಷ ಭರ್ತಿಯಾಗಿರುವುದರಿಂದ ರೈತರ ಮುಖದಲ್ಲಿ ಸಂತಸ ಅರಳಿದೆ.