ಚೆನ್ನೈ: ದೀಪಾವಳಿ ದಿನ ತೆರೆಕಂಡಿರುವ ವಿಜಯ್ ನಟನೆಯ ತಮಿಳು ಚಿತ್ರ ‘ಮರ್ಸಲ್’ಗೆ ವಿವಾದ ಸುತ್ತಿಕೊಂಡಿದೆ. ಕೇಂದ್ರ ಸರ್ಕಾರದ ಜಿಎಸ್ಟಿ ಹಾಗೂ ನೋಟು ರದ್ದತಿಗೆ ಸಂಬಂಧಿಸಿದ ಕೆಲವು ದೃಶ್ಯಗಳನ್ನು ಚಿತ್ರದಿಂದ ತೆಗೆಯಬೇಕು ಎಂದು ತಮಿಳುನಾಡು ಬಿಜೆಪಿ ಘಟಕವು ಬೇಡಿಕೆಯಿಟ್ಟಿದೆ.
ರಾಜಕೀಯ ಪ್ರೇರಿತ ದೃಶ್ಯಗಳನ್ನು ಕೈಬಿಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಪಕ್ಷ ಎಚ್ಚರಿಸಿದೆ.
ಚಿತ್ರದಲ್ಲಿ ಜಿಎಸ್ಟಿ ತೆರಿಗೆಯನ್ನು ಪ್ರಶ್ನಿಸಲಾಗಿದೆ. ಸಿಂಗಪುರದಲ್ಲಿ ಶೇ 8 ತೆರಿಗೆ ವಿಧಿಸುತ್ತಾರೆ. ಆದರೆ ಭಾರತದಲ್ಲಿ ಶೇ 28 ಏಕೆ ಎಂದು ವಿಜಯ್ ಪ್ರಶ್ನಿಸುತ್ತಾರೆ. ಮದ್ಯವನ್ನು ಜಿಎಸ್ಟಿ ಅಡಿ ಏಕೆ ತಂದಿಲ್ಲ ಎಂದೂ ಕೇಳುತ್ತಾರೆ.
ವಿಜಯ್ ಅವರು ರಾಜಕೀಯ ಪ್ರವೇಶಿಸಲು ಈ ರೀತಿ ಸಂಭಾಷಣೆ ಹೇಳಿದ್ದಾರೆ ಎಂದು ಬಿಜೆಪಿಯ ಸೌಂದರ್ರಾಜನ್ ಆರೋಪಿಸಿದ್ದಾರೆ.