ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ, ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂಇಎಸ್) ಬುಧವಾರ ನಗರದಲ್ಲಿ ಆಯೋಜಿಸಿದ್ದ ’ಕರಾಳ ದಿನ’ ಮೆರವಣಿಗೆಯಲ್ಲಿ ಶಾಸಕ ಸಂಭಾಜಿ ಪಾಟೀಲ, ಮೇಯರ್ ಸಂಜೋತಾ ಬಾಂದೇಕರ್ ಭಾಗವಹಿಸಿದ್ದರು.
ಇಲ್ಲಿನ ಶಿವಾಜಿ ಉದ್ಯಾನದಿಂದ ಆರಂಭಗೊಂಡ ಮೆರವಣಿಗೆಯು ಶಹಾಪುರ, ಟಿಳಕವಾಡಿ, ಗೋವಾವೇಸ್ ಮೂಲಕ ಮರಾಠಾ ಮಂದಿರ ತಲುಪಿತು. ಮೇಯರ್ ಸಂಜೋತಾ, ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಭಾಗವಹಿಸಿದ್ದರು.
ಮಹಾರಾಷ್ಟ್ರದಲ್ಲಿ ಸೇರಿಸಿಕೊಳ್ಳುತ್ತೇವೆ: ಮರಾಠಾ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಹಾರಾಷ್ಟ್ರದ ಶಾಸಕ ನಿತೇಶ ರಾಣೆ ಮಾತನಾಡಿ, ‘ಮಹಾರಾಷ್ಟ್ರಕ್ಕೆ ಸೇರಲು ಇಲ್ಲಿನ ಜನರು ಬಯಸುತ್ತಿದ್ದಾರೆ. ಇಂದಲ್ಲ ನಾಳೆ ಅವರ ಬಯಕೆ ಈಡೇರುತ್ತದೆ’ ಎಂದರು.
ಶಾಸಕ ಸಂಭಾಜಿ ಪಾಟೀಲ ಮಾತನಾಡಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಇಲ್ಲಿನ ಮರಾಠಿಗರು ಇನ್ನಷ್ಟು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ಪರಿಶೀಲಿಸಿ ಕ್ರಮ: ಸಚಿವ ಜಾರಕಿಹೊಳಿ
‘ಕರಾಳ ದಿನ ಮೆರವಣಿಗೆಯಲ್ಲಿ ಮೇಯರ್ ಭಾಗವಹಿಸಿರುವುದು ನನ್ನ ಗಮನಕ್ಕೆ ಬಂದಿದೆ. ಸಾಧಕ– ಬಾಧಕಗಳನ್ನು ಪರಿಶೀಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಎಂಇಎಸ್ ಆಚರಿಸುವ ಕರಾಳ ದಿನಕ್ಕೆ ಮಹತ್ವ ನೀಡಬೇಕಾಗಿಲ್ಲ. ಚುನಾವಣೆ ಸಮೀಪಿಸಿದಾಗ ಅವರು ಈ ರೀತಿಯ ಪುಂಡಾಟಿಕೆ ಮಾಡುತ್ತಾರೆ ಎಂದರು.