ಗುರುಮಠಕಲ್: ‘ಹಿಂದುಳಿದ ಬಂಜಾರ ಸಮುದಾಯವನ್ನು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುಖ್ಯವಾಹಿನಿಗೆ ತರಲು ಹಾಗೂ ಬಂಜಾರ ಸಮುದಾಯದ ಅಭಿವೃದ್ಧಿಗೆ ಸದಾ ಸಿದ್ಧ’ ಎಂದು ಕರ್ನಾಟಕ ರಾಜ್ಯ ಗಡಿ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಬುರಾವ ಚಿಂಚನಸೂರ ಹೇಳಿದರು.ಸಮೀಪದ ಬೋರಬಂಡಾ ಗ್ರಾಮದಲ್ಲಿ ಶನಿವಾರ ಕಾರ್ತಿಕ ದೀಪೋತ್ಸವ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ತಿರುಪತಿಗೆ ಹೋಗಲು ಸಾಧ್ಯವಾಗದ ಭಕ್ತರಿಗಾಗಿ ಬೋರಬಂಡಾ ಗ್ರಾಮದ ತಿಮ್ಮಪ್ಪ ದೇವಸ್ಥಾನವೇ ತಿರುಪತಿಯಂತೆ ಅಭಿವೃದ್ಧಿಗೊಳ್ಳುತ್ತಿದ್ದು, ಇದು ಜನರ ಮನೆಗೇ ದೇವರು ಬರುವಂತಿದೆ’ಎಂದು ಹೇಳಿದರು.
ವೀರಭಾರತಿ ಪ್ರತಿಷ್ಠಾನದ ಅಧ್ಯಕ್ಷ ವೈಜನಾಥ ಹಿರೇಮಠ ದೇವಸ್ಥಾನದ ಸಂಸ್ಕೃತಿ ಹಾಗೂ ಪರಂಪರೆಯ ಕುರಿತು ವಿವರಿಸಿದರು. ಖಾಸಾ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಲಿಂಗಸೂಗೂರಿನ ಸಿದ್ದಲಿಂಗ ಸ್ವಾಮೀಜಿ, ನೇರಡುಗುಮ್ಮ ಮಠದ ಸಿದ್ದಲಿಂಗ ಸ್ವಾಮೀಜಿ, ಬಳಿರಾಮ್ ಮಹಾರಾಜ, ಚಂದ್ರಾಮ ಮಹಾರಾಜ, ಅಂಬೂಜಿ ಮಹಾರಾಜ, ವಿಠಲ್ ಮಹಾರಾಜ, ದೇವಸ್ಥಾನ ಸಮಿತಿ ಅಧ್ಯಕ್ಷೆ ಲಕ್ಷ್ಮೀಬಾಯಿ ರಾಠೋಡ, ಪುರಸಭೆ ಅಧ್ಯಕ್ಷ ರವೀಂದ್ರರೆಡ್ಡಿ ಇದ್ದರು.
ದೇವಸ್ಥಾನದ ಕಾರ್ಯದರ್ಶಿ ನರೇಂದ್ರ ರಾಠೋಡ ಸ್ವಾಗತಿಸಿದರು. ಎಸ್.ಎಲ್.ಟಿ ಶಾಲೆಯ ಚೆನ್ನಬಸ್ಸಯ್ಯ ಹಿರೇಮಠ ನಿರೂಪಿಸಿದರು. ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ದೇವರ ದರ್ಶನ ಪಡೆದರು.