ಕುದೂರು(ಮಾಗಡಿ): ಹೋಬಳಿಯ ಹುಲಿಕಲ್ಲು ಹಿರೆಕೆರೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ನೆಟ್ಟಿದ್ದ ಸಸಿಗಳು ನೀರು ಪಾಲಾಗಿ ನಷ್ಟ ಉಂಟಾಗಿದೆ ಎಂದು ಹುಲಿಕಲ್ ಗ್ರಾಮದ ವನಸರಿ ರಕ್ಷಣಾ ಸಮಿತಿ ಆರೋಪಿಸಿದೆ.
ಸಸಿ ನೆಡುವಾಗ ಕನಿಷ್ಟ ಒಂದು ಅಡಿ ಗುಂಡಿಯನ್ನು ತೆಗೆಯದೆ ನಾಮಕಾವಸ್ತೆಗೆ ಮಣ್ಣನ್ನು ಕೆದರಿ ಸಸಿ ನೆಟ್ಟಿದ್ದಾರೆ, ಮಳೆಯ ನೀರು ಕೆರೆಗೆ ಬಂದ ತಕ್ಷಣ ಸಸಿಗಳು ಚಿಗುರುವ ಮುನ್ನವೇ ಒಣಗಿವೆ. ಕೆಲವು ಸಸಿಗಳು ನೀರಲ್ಲಿ ಮುಳುಗಿವೆ ಎಂದು ಗ್ರಾಮದ ವನಸರಿ ರಕ್ಷಣಾ ಸಮಿತಿಯ ನರಸಿಂಹಯ್ಯ ತಿಳಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆ ವತಿಯಿಂದ ₹34 ಲಕ್ಷ ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ದಿ ಮಾಡಿಸಿದ ನಾಮಫಲಕವಿದೆ. ಕೆರೆಯ ಅಭಿವೃದ್ದಿ ಮಾತ್ರ ಶೂನ್ಯವಾಗಿದೆ. ಕೆರೆಯ ಏರಿಯ ಮೇಲೆ ಬೆಳೆದಿರುವ ಗಿಡಗಂಟೆಗಳನ್ನಾದರೂ ತೆಗೆಸಿಲ್ಲ ಎಂದು ಸಮಿತಿ ಆರೋಪಿಸಿದೆ.
ಮಳೆಬಂದ ಕಾರಣ ಅಲ್ಪಸ್ವಲ್ಪ ಕೆರೆಗೆ ನೀರು ಬಂದಿದೆ. ಕೆರೆ ಅಭಿವೃದ್ದಿಯ ಹಣವೂ ಸಹ ನೀರು ಪಾಲಾಗಿದೆ. ಕೆರೆಯ ಅಭಿವೃದ್ದಿ ಮತ್ತು ಸಸಿ ನೆಟ್ಟಿರುವ ಕಾಮಗಾರಿಗಳ ಬಗ್ಗೆ ತನಿಖೆಯಾಗಲಿ ಎಂದು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿರುವುದಾಗಿ ಕಾಂತರಾಜು ತಿಳಿಸಿದ್ದಾರೆ.