ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸುಗಟೂರು ಗ್ರಾಮದಲ್ಲಿ ಕಲ್ಲೇಶ್ವರ ಮತ್ತು ಸಿದ್ಧರಾಮೇಶ್ವರ ಸ್ವಾಮಿ ದೇವರುಗಳ ನಿತ್ಯ ಪೂಜಾ ಆರನೇ ವರ್ಷದ ವಾರ್ಷಿಕೋತ್ಸವವನ್ನು ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಗುರುಗಳಾದ ಎಸ್.ಎನ್.ನಂಜುಡಾರಾಧ್ಯರು ಆಶೀರ್ವಚನವನ್ನು ನೀಡಿ, ‘ಕಾರ್ತಿಕ ಮಾಸ ಶ್ರೇಷ್ಠ ಮಾಸವಾಗಿದೆ. ಕಾರ್ತಿಕ ಮಾಸದ ಸೋಮವಾರಗಳನ್ನು ಅತ್ಯಂತ ಪವಿತ್ರ, ಮಂಗಳಕರ ದಿನವೆಂಬ ನಂಬಿಕೆ ಇದ್ದು ಶಿವನನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಲಾಗುತ್ತದೆ’ ಎಂದರು.
‘ಕಾರ್ತಿಕ ಮಾಸ ವ್ರತಾಚರಣೆಯಿಂದ ಹಿಂದಿನ ಕರ್ಮಗಳನ್ನು ಕಳೆದುಕೊಳ್ಳಲು ಸಾಧ್ಯವಿದೆ. ಕಡೆಯ ಕಾರ್ತಿಕ ಸೋಮವಾರ ಪೂಜಾ ಮಹೋತ್ಸವವನ್ನು ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ’ ಎಂದರು.
ದೇವಾಲಯದ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ನಡೆಸಲಾಯಿತು. ದೇವಾಲಯವನ್ನು ಮತ್ತು ದೇವರನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಅಲಂಕರಿಸಿದ್ದ ಎತ್ತುಗಳನ್ನು ಭಕ್ತರು ಕರೆತಂದಿದ್ದುದು ಆಕರ್ಷಕವಾಗಿತ್ತು. ಸುತ್ತ ಮುತ್ತಲಿನ ಗ್ರಾಮ ಹಾಗೂ ತಾಲ್ಲೂಕುಗಳಿಂದ ಭಕ್ತರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.