ಮಂಡ್ಯ: ಉತ್ತಿ, ಬಿತ್ತಿ ಬೆಳೆಯುವ ರೈತ ಜಗತ್ತಿನ ತುತ್ತಿನ ಚೀಲ ತುಂಬಿ ಸುತ್ತಾನೆ. ಅಂತಹ ರೈತನೇ ಆತ್ಮಹತ್ಯೆಗೆ ಕೊರಳೊಡ್ಡಿರುವುದು ದುರಂತ. ರೈತರು ಸಂಕಷ್ಟದಲ್ಲಿದ್ದಾಗ ಇಡೀ ಸಮಾಜ ರೈತನ ಜೊತೆ ಇರಬೇಕು. ರೈತರಿಗೆ ಮಾನಸಿಕ ಸ್ಥೈರ್ಯ ತುಂಬುವ ಉದ್ದೇಶದಿಂದ ನ. 28ರಂದು ಮಳವಳ್ಳಿ ಪಟ್ಟಣ, ಸುಲ್ತಾನ್ ರಸ್ತೆಯಲ್ಲಿರುವ ಸಮುದಾಯ ಭವನದಲ್ಲಿ ರೈತ ಸಮಾವೇಶ ನಡೆಯಲಿದೆ.
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು. ಆದರೆ ಸರ್ಕಾರಗಳ ಅವೈಜ್ಞಾನಿಕ ನೀತಿಯಿಂದ ರೈತ ಕಂಗಾಲಾಗಿದ್ದಾನೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ಆತ ನಷ್ಟ ಅನುಭವಿಸುತ್ತಿದ್ಧಾನೆ. ಇಂತಹ ಸಂದರ್ಭದಲ್ಲಿ ಈ ಸಮಾವೇಶವು ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಬೆಳೆ ನಷ್ಟವಾದರೆ ರೈತರು ಮೊದಲು ಮಾಡಬೇಕಾಗಿರುವ ಪ್ರಕ್ರಿಯೆಗಳ ಬಗ್ಗೆ ಕೃಷಿ ತಜ್ಞರು ಮಾರ್ಗದರ್ಶನ ಮಾಡುತ್ತಾರೆ. ಬೆಳೆ ವಿಮೆ ಮಾಡಿಸುವ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ. ವಿಮೆಯ ಕಂತನ್ನು ಸರಿಯಾದ ಸಮಯದಲ್ಲಿ ಪಾವತಿ ಮಾಡುವ ಬಗೆಯನ್ನು ಇಲ್ಲಿ ಚರ್ಚಿಸಬಹುದಾಗಿದೆ.
ರೈತನ ಹಕ್ಕುಗಳ ಮಂಥನ: ರೈತರಿಗೆ ಹಲವು ಹಕ್ಕುಗಳಿವೆ. ಸರ್ಕಾರಗಳು ಶಾಸನಾತ್ಮಕವಾಗಿ ಹಲವು ಹಕ್ಕುಗಳನ್ನು ಕಲ್ಪಿಸಿವೆ. ಈ ನಿಟ್ಟಿನಲ್ಲಿ ರೈತನಿಗೆ ಇರುವ ಎಲ್ಲಾ ಹಕ್ಕುಗಳು ಸರಿಯಾಗಿ ಜಾರಿಯಾಗಿವೆ ಯೇ ಎಂಬ ಬಗ್ಗೆ ಸಮಾ ವೇಶದಲ್ಲಿ ಬೆಳಕು ಚೆಲ್ಲಲಾಗು ತ್ತದೆ. ತಜ್ಞರು ಈ ವಿಷಯವಾಗಿ ರೈತರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ. ಬಿತ್ತನೆ, ರಸಗೊಬ್ಬರ, ಕೀಟನಾಶಕಗಳ ಸಿಂಪಡಣೆ ಮುಂತಾದ ವಿಷಯಗಳಲ್ಲಿ ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ತಜ್ಞರು ಮಾರ್ಗದರ್ಶನ ಮಾಡುವರು.
‘ಈ ಸಮಾವೇಶದಲ್ಲಿ ನಾನೂ ಹಾಜರಿರುತ್ತೇನೆ. ಮಳವಳ್ಳಿ ತಾಲ್ಲೂಕಿನ ಅನುಭವಿಸುತ್ತಿರುವ ಸಮಸ್ಯೆಗಳನ್ನು ಸ್ಥಳದಲ್ಲಿ ಇದ್ದು ಅರಿಯುತ್ತೇನೆ. ಆ ಎಲ್ಲಾ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಮಾಡುವ ಕ್ರಮ ಕೈಗೊಳ್ಳುತ್ತೇನೆ. ಕೃಷಿ ಇಲಾಖೆ ಅಧಿಕಾರಿಗಳಿಗೆ ಸ್ಥಳದಲ್ಲೇ ಕರೆ ಮಾಡಿ ರೈತರ ಕೆಲಸ ಮಾಡಿಕೊಡುವಂತೆ ಆದೇಶ ನೀಡುತ್ತೇನೆ.
ರೈತರ ಕೆಲಸ ಮಾಡುವುದೇ ನನ್ನ ಮೊದಲ ಆದ್ಯತೆ. ಕಳೆದ ಹತ್ತಾರು ವರ್ಷಗಳಿಂದ ರೈತರಿಗಾಗಿ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಅದೇ ಕೆಲಸ ಮುಂದುವರಿಸುತ್ತೇನೆ’ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ಸಮಾವೇಶದಲ್ಲಿ ಭಾಗವಹಿಸುವ ರೈತರು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಲು ಟಿ.ಎನ್.ಬಸವರಾಜು ಮೊ: 9731399460, ಎಲ್.ಎಸ್.ಮಹೇಶ್ ಮೊ: 9741773751 ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.