ಚೆನ್ನೈ: ಎಐಎಡಿಎಂಕೆ ಮುಖ್ಯಸ್ಥೆ ವಿ.ಕೆ. ಶಶಿಕಲಾ ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಸೇರಿದ ಕಚೇರಿಗಳು ಮತ್ತು ಉದ್ಯಮಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದು, ₹ 1430 ಕೋಟಿ ಮೌಲ್ಯದ ಅಘೋಷಿತ ಸಂಪತ್ತು ಪತ್ತೆ ಮಾಡಿರುವುದಾಗಿ ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆಯ ವೇಳೆ ₹ 7 ಕೋಟಿ ನಗದು ಹಾಗೂ ₹ 5 ಕೋಟಿ ಬೆಲೆಯ ಚಿನ್ನಾಭರಣಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ತೆರಿಗೆ ವಂಚನೆ ಮತ್ತು ಅಕ್ರಮ ಹಣ ಗಳಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ಚೆನ್ನೈನಲ್ಲಿರುವ ಜಯಾ ಟಿವಿ ಕಚೇರಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಕೊಡನಾಡು ಎಸ್ಟೇಟ್, ಎಐಎಡಿಎಂಕೆ ಮುಖಂಎ ನಮಧು ಎಂಜಿಆರ್, ಜಯಾ ಟಿವಿ, ಜಾಸ್ ಸಿನಿಮಾಸ್ ಸೇರಿದಂತೆ ಶಶಿಕಲಾ ಅವರ ಅಳಿಯ ಟಿಟಿವಿ ದಿನಕರನ್ ಅವರ ಆಸ್ತಿ ಮೇಲೂ ದಾಳಿ ನಡೆದಿದೆ.
ಚೆನ್ನೈ, ತಮಿಳುನಾಡಿನ ಪ್ರಮುಖ ನಗರಗಳು ಸೇರಿದಂತೆ ಬೆಂಗಳೂರು, ಪುದುಚ್ಚೇರಿ, ಹೈದರಾಬಾದ್, ದೆಹಲಿಯಲ್ಲಿ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು.