ಜಮಖಂಡಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಗೆ ಜಮಖಂಡಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಪ್ರಚಾರ ವಾಹನಕ್ಕೆ ಬುಧಾರ ಚಾಲನೆ ನೀಡಲಾಯಿತು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ತಾಲ್ಲೂಕಿನ ಹುಲ್ಯಾಳ ಗ್ರಾಮದ ಮಾರುತೇಶ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಬೇಸತ್ತಿರುವ ಜನತೆ ಬದಲಾವಣೆ ಬಯಸಿದ್ದಾರೆ’ ಎಂದರು.
ಪರಿವರ್ತನಾ ಯಾತ್ರೆಗೆ ಎಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಅದರಿಂದ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆಯುವುದು ಖಚಿತವಾಗಿದೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ ಮಾತನಾಡಿದರು. ರಾಜುಗೌಡ ಪಾಟೀಲ, ಸದಾಶಿವ ಕವಟಗಿ, ಸಿ.ಟಿ. ಉಪಾಧ್ಯೆ, ಎಂ.ಬಿ. ನ್ಯಾಮಗೌಡ, ಮಲ್ಲಪ್ಪ ಮಲಘಾಣ, ಪ್ರಕಾಶ ಕಾಳೆ, ಪಂಡಿತ ಭೂಮಾರ, ಸದಾಶಿವ ಕಲೂತಿ, ಸಿದ್ದಲಿಂಗಯ್ಯ ಕಂಬಿ, ಶ್ರೀಧರ ಕನ್ನೂರ, ಶ್ರೀನಿವಾಸ ಪುರೋಹಿತ ಮತ್ತಿತರರು ಹಾಜರಿದ್ದರು.