ಶಿಗ್ಗಾವಿ: ಕರ್ನಾಟಕ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯಿದೆ(ಕೆ.ಪಿ.ಎಂ.ಇ) ತಿದ್ದುಪಡಿಗೆ ವಿರೋಧಿಸಿ ಬೆಳಗಾವಿ ಸುವರ್ಣ ಸೌಧದ ಮುಂದೆ ನಡೆಸುತ್ತಿರುವ ಮುಷ್ಕರದಲ್ಲಿ ಶಿಗ್ಗಾವಿ ಖಾಸಗಿ ಆಸ್ಪತ್ರೆ ವೈದ್ಯರು ಪಾಲ್ಗೊಂಡ ಕಾರಣ ಬುಧವಾರ ರೋಗಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿ ಹಾಸಿಗೆಗಳು ತುಂಬಿರುವ ದೃಶ್ಯ ಕಂಡು ಬಂದಿತು.
ಬುಧವಾರ ಒಂದೇ ದಿನದಲ್ಲಿ ಸುಮಾರು 524 ಹೊರ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 12 ಮಹಿಳೆಯರಿಗೆ ಹೆರಿಗೆ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. 3 ಜನರಿಗೆ ಮೂಳೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸುಮಾರು 54 ಜನ ಒಳರೋಗಿಗಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿಕೊಳ್ಳಲಾಗಿದೆ.
ರೋಗಿಗಳು ಸರತಿಯಲ್ಲಿ ನಿಂತು ಪಾವತಿ ಪಡೆದು ಚಿಕಿತ್ಸೆ ಪಡೆದಿದ್ದಾರೆ. 11 ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಇಲ್ಲಿನ ವೈದ್ಯರು ಹಗಲು ರಾತ್ರಿ ಎನ್ನದೇ, ಆಸ್ಪತ್ರೆಗೆ ಬಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ಶಿಗ್ಗಾವಿ ಸರ್ಕಾರಿ ಆಸ್ಪತ್ರೆ ತಾಲ್ಲೂಕು ವೈದ್ಯಾಧಿಕಾರಿ ಡಾ.ಹನುಮಂತಪ್ಪ ಅವರು ಪ್ರಜಾವಾಣಿಗೆ ಮಾಹಿತಿ ನೀಡಿದರು.