ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗಂಗಾ’ ಧಾರಾವಾಹಿಯ ಹೊಸ ಪರ್ವ ಆರಂಭವಾಗಿದೆ. ಇದು ಗಂಗಾಳ ಬದುಕಿನ ಹೊಸ ಅಧ್ಯಾಯವೂ ಹೌದು.
ಸಾಗರ್ ಈ ಕಥೆಯ ನಾಯಕ. ಆತನನ್ನು ಬದುಕಿಸಲು ಕಥೆಯ ನಾಯಕಿ ಪುಟ್ಟ ಗಂಗಾ ಅವನ ಕೈಯಿಂದ ಅರಿವಿಲ್ಲದಂತೆ ತಾಳಿ ಕಟ್ಟಿಸಿಕೊಂಡಿರುತ್ತಾಳೆ. ತನ್ನ ಮಗ ಸಾಗರ್ ಗಂಗಾಳ ಜೊತೆ ಬೆರತು ಹೋಗಬಹುದೆಂಬ ಭಯ ಸಾಗರ್ ತಾಯಿ ನಂದಿನಿಯದ್ದು.
ಗಂಗಾಳನ್ನು ಆತನಿಂದ ದೂರ ಇಡುವ ಪ್ರಯತ್ನಕ್ಕೆ ಮುಂದಾಗುತ್ತಾಳೆ. ಬಾಲಕಿಯಾಗಿದ್ದ ಗಂಗಾ ಈಗ ಬೆಳೆದು ನಿಂತಿದ್ದಾಳೆ. ಸಾಗರ್ ಜೊತೆಗೆ ಆಗಿದ್ದ ಸ್ನೇಹ ಅವಳಲ್ಲಿ ಪ್ರೀತಿಯಾಗಿ ಚಿಗುರೊಡೆದಿದೆ. ಆದರೆ, ಸಾಗರ್ಗೆ ಆಕೆಯ ಬಗ್ಗೆ ಇನ್ನೂ ಅದೇ ಅಭಿಮಾನ ಇದೆಯಾ?
ರಾಧಕ್ಕ ತನ್ನ ರಾಜಕುಮಾರನಾದ ಸಾಗರ್ಗಾಗಿ ಬಚ್ಚಿಟ್ಟುಕೊಂಡ ಸತ್ಯಗಳನ್ನು ತನ್ನೊಳಗೆ ಸಾಯಿಸುತ್ತಾಳಾ? ಅವನ ನಿಜವಾದ ಆಯ್ಕೆ ತಾಯಿಯ ವಾತ್ಸಲ್ಯವೋ ಅಥವಾ ಗಂಗಾಳ ಪ್ರೀತಿಯೋ ಎಂಬ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
‘ಗೃಹಲಕ್ಷ್ಮಿ’, ‘ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿ ನಿರ್ಮಿಸಿ ನಿರ್ದೇಶಿಸಿರುವ ಸ್ವಪ್ನಕೃಷ್ಣ ಈ ಧಾರಾವಾಹಿಯ ನಿರ್ಮಾಣ ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದಾರೆ.